Monday, June 1, 2009

ಸ್ವಪ್ನವಾಸವದತ್ತಂ

( ಭಾಸ ಭಾರತದ ಅತ್ಯಂತ ಪ್ರಾಚೀನ ನಾಟಕಕಾರರುಗಳಲ್ಲಿ ಒಬ್ಬ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕಾರ ಎನ್ನುವುದಕ್ಕಿಂತ ಕವಿ ಎನ್ನುವುದು ಹೆಚ್ಚು ಸೂಕ್ತ. ಈತ ಕಾಳಿದಾಸನಿಗಿಂತ ಹಿಂದಿನವನು ಅಥವಾ ಅವನ ಸಮಕಾಲೀನ ಎಂತಲೂ ಹೇಳಲಾಗುತ್ತದೆ. ಸುಮಾರು ಕ್ರಿಸ್ತಶಕೆ ಮೂರನೇ ಶತಮಾನ. ಆದರೆ ಅವನ ದೇಶಕಾಲಾದಿಗಳ ಬಗ್ಗೆ ಇನ್ನೂ ನಿಖರವಾದ ಅಭಿಪ್ರಾಯ ಸಾಧ್ಯವಾಗದೇ 'ಭಾಸ ಸಮಸ್ಯೆ' ಎಂದೇ ಪ್ರಸಿದ್ದವಾಗಿದೆ. ಭಾಸನಿಂದ ರಚಿಸಲ್ಪಟ್ಟವು ಎಂದು ಹೇಳಲಾದ ನಾಟಕಗಳ ಸಂಗ್ರಹ ಕೇರಳದಲ್ಲಿ ದೊರೆತದ್ದರಿಂದ ಭಾಸ ದಕ್ಷಿಣ ಭಾರತದವನಿರಬೇಕೆಂದು ಊಹಿಸಲಾಗಿದೆ. ಈ ವರೆಗೆ ಅವನ ಸ್ವಪ್ನವಾಸವದತ್ತವೂ ಸೇರಿದಂತೆಸುಮಾರು ಹನ್ನೆರಡು ನಾಟಕಗಳು ಸಂಪಾದಿಸಲ್ಪಟ್ಟಿವೆ . )

ಸ್ವಪ್ನ ವಾಸವದತ್ತ ಆರು ಅಂಕಗಳ ನಾಟಕ. ಭಾಸ ಇದನ್ನು ತಾನೇ ರಚಿಸಿದ 'ಪ್ರತಿಜ್ಞಾಯೌಗಂಧರಾಯಣ' ಎಂಬ ನಾಟಕದ ಮುಂದುವರಿದ (sequel) ಭಾಗದಂತೆ ನಿರೂಪಿಸಿದ್ದಾನೆ. ಭಾಸನು ಭರತ ಮುನಿಯ ನಾಟ್ಯಶಾಸ್ತ್ರದ ಯಾವ ನಿಯಮಗಳನ್ನೂ ತನ್ನ ನಾಟಕ ರಚನೆಯಲ್ಲಿ ಪಾಲಿಸುವುದಿಲ್ಲ ಎಂಬ ಆಪಾದನೆ ಇದೆ. ಆದರೆ ಸ್ವಪ್ನವಾಸವದತ್ತದ ಮಟ್ಟಿಗೆ ಹೇಳುವದಾದರೆ ಇದೊಂದು ನಾಟ್ಯಶಾಸ್ತ್ರದ ಬಹುಪಾಲು ಎಲ್ಲ ನಿಯಮಗಳನ್ನು ಪಾಲಿಸುವ ಪರಿಪೂರ್ಣ ನಾಟಕ. ನಿಯಮದಂತೆ ನಾಟಕದ ತಲೆಬರಹ, ಆ ಕಥೆಯ ಯಾವುದಾದರೂ ಮುಖ್ಯ ದೃಷ್ಯವನ್ನು ಅಥವಾ ಅಲ್ಲಿನ ಮುಖ್ಯ ಪಾತ್ರವೊಂದರ (ನಾಯಕನ ಅಥವಾ ನಾಯಿಕೆಯ) ಹೆಸರನ್ನು ಹೇಳಬೇಕು. 'ವಾಸವದತ್ತಾ' ಈ ನಾಟಕದ ನಾಯಿಕೆ. ಮತ್ತು ನಾಯಕ, ವತ್ಸ ದೇಶದ ಮಹಾರಾಜನಾದ ಉದಯನ, ತನ್ನ ಪತ್ನಿ ವಾಸವದತ್ತೆಯನ್ನು ಕನಸಿನಲ್ಲಿ ಕಾಣುವ ಸನ್ನಿವೇಶ (ಸ್ವಪ್ನಾಂಕ) ಕಥೆಗೆ ಹೊಸ ತಿರುವನ್ನು ಕೊಡುತ್ತದೆ. ಅದಕ್ಕನುಸಾರ ಭಾಸ ಈ ನಾಟಕದ ಹೆಸರನ್ನು ಇಡುತ್ತಾನೆ. 'ಸ್ವಪ್ನವಾಸವದತ್ತಂ'. Dream of Vasavadatta.


" ಉದಯನವೇಂದು ಸವರ್ಣಾ
ವಾಸವದತ್ತಾಬಲೌ ಬಲಸತ್ವಾ
ಪದ್ಮಾವತೀ ಪೂರ್ಣೌ
ವಸಂತಕಂ ಭುಜೌ ಪಾತಾ "

ಈ ನಾಂದಿ ಪದ್ಯದೊಂದಿಗೆ ಸ್ವಪ್ನವಾಸವದತ್ತ ಆರಂಭವಾಗುತ್ತದೆ. ಇದು ಬಲರಾಮನ ಸ್ತುತಿ. (ಆದರೆ ಕೃಷಿ ದೇವತೆಯಾದ ಬಲರಾಮನನ್ನು ಭಾಸ ತನ್ನ ನಾಟಕದ ಆರಂಭದಲ್ಲಿ ಏಕೆ ನಮಿಸುತ್ತಾನೆ ಎಂಬುವುದಕ್ಕೆ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ.) ಈ ನಾಂದಿಯಲ್ಲಿ ಗಮನಿಸಬೇಕಾದ ಸುಂದರ ಅಂಶವೆಂದರೆ ಭಾಸ, ಶ್ಲೇಶಾಲಂಕಾರದ ಸಹಾಯದಿಂದ ನಾಟಕದಲ್ಲಿಯ ಉದಯನ, ವಾಸವದತ್ತೆ, ಪದ್ಮಾವತಿ, ವಸಂತಕ ಇಂತಹ ಪ್ರಮುಖ ಪಾತ್ರಗಳ ಹೆಸರನ್ನು ಚಮತ್ಕಾರವಾಗಿ ಅಡಗಿಸಿರುವುದು.

ಇಲ್ಲಿರುವುದು ಬಲಭದ್ರನ ತೋಳುಗಳ ವರ್ಣನೆ. 'ಉದಯನವೇಂದು' ಎಂದರೆ ಉದಯಿಸುತ್ತಿರುವ ಚಂದ್ರ (ಇಂದು). ಬಲರಾಮನ ತೋಳುಗಳು ಆಗತಾನೆ ಉದಯಿಸುತ್ತಿರುವ ಚಂದ್ರನ ಬಣ್ಣದವು. Spotless white. ಈ ಸಾಲಿನಲ್ಲಿ ಉದಯನವೇಂದು ಎನ್ನುತ್ತಲೇ ಭಾಸ ತನ್ನ ನಾಟಕದ ನಾಯಕ, 'ಉದಯನ' ನ ಹೆಸರನ್ನು ಹೇಳಿಬಿಡುತ್ತಾನೆ. 'ವಾಸವದತ್ತಾಬಲೌ ಬಲಸತ್ವಾ' ಇದು ಎರಡನೇ ಸಾಲು. ಬಲಭದ್ರನು ಮದಿರಾ ಪ್ರಿಯ. ಅದಕ್ಕೆ ಭಾಸ, ಅವನ ತೋಳುಗಳಿಗೆ ಆ ಸುರಾಪಾನದಿಂದ (ಸುರೆ=ಆಸವ) ಬಲ ದೊರೆತು ಅವು ತುಂಬಿಕೊಂಡಿವೆ ಎನ್ನುತ್ತಾನೆ. ಈ ಸಾಲಿನಲ್ಲಿ ನಾಯಿಕೆ 'ವಸವದತ್ತಾ' ಳ ಹೆಸರು ಉಲ್ಲೇಖಿಸಿದಂತಾಗುತ್ತದೆ. 'ಪದ್ಮಾವತೀ ಪೂರ್ಣೌ', ಪದ್ಮ ಅಂದರೆ ಕಮಲ, ಕಮಲದಂತೆ ಅರಳಿರುವ ತೋಳುಗಳು ಬಲರಾಮನದ್ದು. ಇಲ್ಲಿ 'ಪದ್ಮಾವತೀ' ಪದಪ್ರಯೋಗ ಉದಯನನ ಎರಡನೇ ಪತ್ನಿಯ ಹೆಸರನ್ನು ಹೇಳುತ್ತದೆ. ವಸಂತಕನದ್ದು ಈ ನಾಟಕದಲ್ಲಿ ವಿದೂಷಕನ (comedian) ಪಾತ್ರ. ಈತ ಉದಯನನ ಆಪ್ತ ಮಿತ್ರ. ಅವನ ಹೆಸರನ್ನೂ ಭಾಸ ನಾಂದಿಯಲ್ಲೇ ಹೇಳಿಬಿಡುತ್ತಾನೆ. ಹೀಗೆ ನಾಟಕದ ಪಾತ್ರಗಳ ಪರಿಚಯ ನಮಗೆ ನಾಟಕದ ಮೊದಲಲ್ಲೇ ಮಾಡಿಸುತ್ತದೆ ಈ ನಾಂದಿ. ಆದರೆ ಪಾತ್ರಗಳ ಪ್ರವೇಶವಾಗುವವರೆಗೂ ಈ ನಾಂದಿ ಶ್ಲೋಕದ ಚಮತ್ಕಾರದ ಅರಿವಾಗುವುದಿಲ್ಲ. ಅಲ್ಲಿಯವರೆಗೆ ನಮಗೆ ಈ ಪದ್ಯದಲ್ಲಿ ಕಾಣುವುದು ಬಲಯುತವೂ ಸುಂದರವೂ ಆದ ಬಲರಾಮನ ತೋಳುಗಳು ನಮ್ಮನ್ನು ರಕ್ಷಿಸಲಿ ಎಂಬ ಕೋರಿಕೆ ಮಾತ್ರ.


ಮೊದಲೇ ಹೇಳಿದಂತೆ ಸ್ವಪ್ನವಾಸವದತ್ತ ಪ್ರತಿಜ್ಜ್ನಾಯೌಗಂಧರಾಯಣ ಎಂಬ ನಾಟಕದ ಮುಂದುವರಿದ ಭಾಗ. ಪ್ರತಿಜ್ಜ್ನಾಯೌಗಂಧರಾಯಣ ನಾಟಕದ ಕೊನೆಯಲ್ಲಿ ಕುಶಲ ಮಂತ್ರಿಯಾದ ಯೌಗಂಧರಾಯಣನ ನೆರವಿನಿಂದ ಉದಯನ ಆವಂತಿ ದೇಶದ ರಾಜಕುವರಿ ವಾಸವದತ್ತೆಯನ್ನು ಅಪಹರಿಸಿ ವಿವಾಹವಾಗಿರುತ್ತಾನೆ. ಪ್ರತಿಜ್ಜ್ನಾಯೌಗಂಧರಾಯಣದ ನಾಯಕ ನಾಯಿಕೆಯರು ಉದಯನವಾಸವದತ್ತೆಯರಾದರೂ ಅಲ್ಲಿ ಇವರಿಬ್ಬರೂ ರಂಗದಮೇಲೆ ಬರುವುದೇ ಇಲ್ಲ! ಅಲ್ಲಿ ಯೌಗಂಧರಾಯಣನೇ ಮುಖ್ಯಪಾತ್ರವಹಿಸುತ್ತಾನೆ. ಆದರೆ ಸ್ವಪ್ನವಾಸವದತ್ತದಲ್ಲಿ ಮೊದಲ ದೃಷ್ಯದಲ್ಲೇ ವಾಸವದತ್ತೆಯ ಪ್ರವೇಶವಾಗುತ್ತದೆ.


ಈ ನಾಟಕದ ಹಿನ್ನಲೆ ಹೀಗಿದೆ. ಪ್ರಿಯಸಖಿ ಮತ್ತು ಲಲಿತ ಕಲೆಗಳಲ್ಲಿ ತನ್ನ ಶಿಷ್ಯೆಯಾದ ವಾಸವದತ್ತೆಯನ್ನು ವಿವಾಹವಾದ ಬಳಿಕ ಉದಯನನಿಗೆ ರಾಜ್ಯಭಾರದಲ್ಲಿ ಆಸಕ್ತಿ ಕಳೆದುಹೋಗಿರುತ್ತದೆ. ಇದರಿಂದ ಉದಯನನ ರಾಜಧಾನಿ ಕೌಶಾಂಬಿ ವೈರಿರಾಜರುಗಳ ಪಾಲಾಗಿ ಹೋಗುತ್ತದೆ. ಕುಶಲ ಮಂತ್ರಿಯಾದ ಯೌಗಂಧರಾಯಣನು ರಾಜ್ಯವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಉಪಾಯವೊಂದನ್ನು ಮಾಡುತ್ತಾನೆ. ಉದಯನ ಇಲ್ಲದ ಸಮಯದಲ್ಲಿ, ವಾಸವದತ್ತೆ ಮತ್ತು ಯೌಗಂಧರಾಯಣನು ಆಕಸ್ಮಿಕವಾಗಿ ಘಟಿಸಿದ ಬೆಂಕಿ ಅನಾಹುತವೊಂದರಲ್ಲಿ ಮೃತರಾದರು ಎಂಬುವಂತೆ ನಾಟಕವಾಡುತ್ತಾನೆ. ಜೊತೆಯಲ್ಲಿ ಯೌಗಂಧರಾಯಣನಿಗೆ ರಾಜ್ಯಬಲವರ್ಧನೆಗಾಗಿ ಉದಯನನು ಮಗಧ ದೇಶದ ರಾಜಕುಮಾರಿಯಾದ ಪದ್ಮಾವತಿಯನ್ನು ವರಿಸಿ ಮಗಧ ದೇಶದೊಂದಿಗೆ ಸಂಬಂಧ ಬೆಳೆಯಲಿ ಎಂಬ ಆಶಯವೂ ಇರುತ್ತದೆ. ವಾಸವದತ್ತೆಯೂ ಪತಿಯ ಒಳಿತಿಗಾಗಿ ಈ ನಾಟಕವನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ವಾಸವದತ್ತೆಯನ್ನು ಕಳೆದುಕೊಂಡ ಉದಯನ ತೀವ್ರ ಶೋಕದಲ್ಲಿರುತ್ತಾನೆ.



ಯೌಗಂಧರಾಯಣ ಓರ್ವ ಸನ್ಯಾಸಿಯಂತೆ ಮತ್ತು ವಾಸವದತ್ತೆ ಅವನ ತಂಗಿಯಾಗಿ ಆವಂತಿಕಾ ಎಂಬ ಹೆಸರಿನಲ್ಲಿ ಮಗಧ ರಾಜ್ಯಕ್ಕೆ ಬರುತ್ತಾರೆ ಎಂಬಲ್ಲಿಂದ ನಾಟಕದ ಮೊದಲ ಅಂಕ ಆರಂಭವಾಗುತ್ತದೆ. ಯೌಗಂಧರಾಯಣ ರಾಜಕುಮಾರಿ ಪದ್ಮಾವತಿಯನ್ನು ಭೇಟಿ ಮಾಡಿ ತನ್ನ ತಂಗಿಯ ಪತಿ ವ್ಯವಹಾರ ನಿಮಿತ್ತ ಹೊರ ಪ್ರದೇಶಕ್ಕೆ ಹೋಗಿರುವುದಾಗಿಯೂ ಆತ ಬಂದ ನಂತರದಲ್ಲಿ ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಮತ್ತು ಅಲ್ಲಿಯವರೆಗೆ ಪದ್ಮಾವತಿಯ ಸಖಿಯಂತೆ ವಾಸವದತ್ತೆಯನ್ನು ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಾನೆ.



ಮುಂದೆ ಉದಯನ ಮಗಧ ರಾಜ್ಯಕ್ಕೆ ಅತಿಥಿಯಾಗಿ ಬಂದಾಗ ಮಗಧ ದೇಶದ ರಾಜ ಉದಯನನ ರಾಜಧಾನಿ ಕೌಶಾಂಬಿಯನ್ನು ಮರಳಿ ಪಡೆಯಲು ಸಹಾಯ ಮಾಡಲು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಬದಲಾಗಿ ತನ್ನ ತಂಗಿ ಪದ್ಮಾವತಿಯನ್ನು ವಿವಾಹವಾಗುವಂತೆ ಉದಯನನನ್ನು ಕೇಳಿಕೊಳ್ಳುತ್ತಾನೆ. ಆದರೆ ಉದಯನನಿಗೆ ವಾಸವದತ್ತೆಯನ್ನು ಕಳೆದುಕೊಂಡ ದುಃಖ ಇನ್ನೂ ಮರೆಯಾಗಿರುವುದಿಲ್ಲ. ಆತನ ದುಃಖವನ್ನು ಭಾಸ, ಸೀತೆಯನ್ನು ಕಾಡಿನಲ್ಲಿ ಕಳೆದುಕೊಂಡ ರಾಮನ ಶೋಕಕ್ಕೆ ಹೋಲಿಸುತ್ತಾನೆ. ಆದರೂ ರಾಜ್ಯವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾರಣಗಳಿಂದ ಈ ವಿವಾಹಕ್ಕೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಸಂತಸಗೊಂಡ ಪದ್ಮಾವತಿ ಈ ವಿಷಯವನ್ನು ತನ್ನ ಸಖಿ ಆವಂತಿಕಾಳಿಗೆ (ವಾಸವದತ್ತೆಗೆ) ತಿಳಿಸುತ್ತಾಳೆ. ವಾಸವದತ್ತೆಗೆ ತನ್ನ ಪತಿಯನ್ನು ತನ್ನ ಕಣ್ಣೆದುರಿಗೇ ಕಳೆದುಕೊಳ್ಳುವ ಬಗ್ಗೆ ಸಂಕಟವಾಗುತ್ತದೆ. ಆದರೆ ಭಾಸ ಆ ನೊಂದ ಮನಕ್ಕೆ ಸಾಂತ್ವನ ನೀಡಲೋ ಎಂಬಂತೆ ಒಂದು ಸುಂದರ ದೃಶ್ಯವನ್ನು ನಿರ್ಮಿಸುತ್ತಾನೆ. ಉದಯನ ಮತ್ತು ಆತನ ಮಿತ್ರ, ವಸಂತಕ ಮಗಧ ರಾಜನ ಅರಮನೆಯ ಲತಾಮಂಟಪದಲ್ಲಿ ಕುಳಿತಿರುವ ಸಂದರ್ಭದಲ್ಲಿ ವಾಸವದತ್ತೆಯೂ ಆ ಉದ್ಯಾನದ ಇನ್ನೊಂದು ಭಾಗದಲ್ಲಿರುತ್ತಾಳೆ. ಆಕೆ ಲತೆಗಳ ಸಮೂಹ ಮರೆಯಾದ ಕಾರಣದಿಂದ ಉದಯನ ಮತ್ತು ವಸಂತಕನಿಗೆ ಕಾಣುವುದಿಲ್ಲ. ಆದರೆ ವಾಸವದತ್ತೆ ಇವರು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಆಗ ವಸಂತಕ ಉದಯನನನ್ನು ನಿನಗೆ ಪದ್ಮಾವತಿ ಮತ್ತು ವಾಸವದತ್ತೆಯರಲ್ಲಿ ಯಾರು ಹೆಚ್ಚು ಪ್ರಿಯರು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಉದಯನ ಪದ್ಮಾವತಿ ಗುಣವಂತೆ ಮತ್ತು ತನಗೆ ನೆಚ್ಚಿನವಳಾದರೂ, ವಾಸವದತ್ತೆ ತನ್ನ ಮೊದಲ ಪ್ರೇಮ ಮತ್ತು ಆಪ್ತ ಸಖಿ. ಅವಳ ಸ್ಥಾನ ತನ್ನ ಹೃದಯದಲ್ಲಿ ಮತ್ತೆ ಯಾರಿಂದಲೂ ತುಂಬಲು ಅಸಾಧ್ಯ ಎನ್ನುತ್ತಾನೆ. ಮನಸ್ಸಿಗೆ ಮುದ ನೀಡುವ ಇಂತಹ ಪ್ರಯೋಗಗಳನ್ನು ಭಾಸ ತನ್ನ ನಾಟಕಗಳಲ್ಲಿ ಹೇರಳವಾಗಿ ಮಾಡುತ್ತಾನೆ. ಸಂಸ್ಕೃತದ ಅನೇಕ ನಾಟಕಗಳಲ್ಲಿ ಮತ್ತು ಕಾವ್ಯಗಳಲ್ಲಿ ಉದಯನ ಎಂಬ ಹೆಸರಿನ ಪಾತ್ರವನ್ನು ಕಾಣಬಹುದು. ಆ ಎಲ್ಲ ನಾಟಕಗಳಲ್ಲಿ ಉದಯನನನ್ನು ಸ್ತ್ರೀಲೋಲುಪ ಮತ್ತು ಅತ್ಯಂತ ಚಂಚಲ ಪಾತ್ರವನ್ನಾಗಿ ಚಿತ್ರಿಸುತ್ತಾರೆ. ಆದರೆ ಸ್ವಪ್ನವಾಸವದತ್ತದಲ್ಲಿನ ಉದಯನ ಅತ್ಯಂತ ಸೌಮ್ಯವಾದ ಪಾತ್ರ. ಕಳೆದುಕೊಂಡ ಪತ್ನಿಗಾಗಿ ಪರಿತಪಿಸುತ್ತಿರುತ್ತಾನೆ.



ಮುಂದೆ ಪದ್ಮಾವತಿ ಮತ್ತು ಉದಯನರ ಮದುವೆಯ ಸಂದರ್ಭದಲ್ಲಿ ವಾಸವದತ್ತೆಗೇ ವರಮಾಲೆಯನ್ನು ಸಿದ್ದಪಡಿಸುವಂತೆ ಪದ್ಮಾವತಿ ಕೇಳಿಕೊಳ್ಳುತ್ತಾಳೆ. ಆಗ ವಾಸವದತ್ತೆ ಆ ಮಾಲೆಯಲ್ಲಿ ಪತಿಯ ಆಯಸ್ಸು ಹೆಚ್ಚುವಂತೆ ಪ್ರಭಾವಿಸುವ ಮೂಲಿಕೆಯೊಂದನ್ನು ಹೆಚ್ಚು ಹೆಚ್ಚಾಗಿ ಸೇರಿಸಿ ವರಮಾಲೆಯನ್ನು ಸುಂದರವಾಗಿ ಸಿದ್ದಪಡಿಸುತ್ತಾಳೆ. ವಾಸವದತ್ತೆ ಮತ್ತು ಪದ್ಮಾವತಿಯರ ನಡುವೆ ಸಹಜವಾಗಿ ಇರಬಹುದಾಗಿದ್ದ ಸವತಿ ಅಸೂಯೆಯನ್ನು ಯಾವ ಸನ್ನಿವೇಶವನ್ನೂ ಭಾಸ ತೋರಿಸುವುದಿಲ್ಲ. ಬದಲಿಗೆ ಇವರಿಬ್ಬರಲ್ಲಿನ ಸ್ನೇಹವನ್ನು ಅಲ್ಲಲ್ಲಿ ತೋರಿಸುತ್ತಾನೆ.



ಐದನೇ ಅಂಕ ಸ್ವಪ್ನಾಂಕ. ಈ ಅಂಕವನ್ನು ಅತ್ಯಂತ ಸುಂದರವಾಗಿ ಭಾಸ ನಿರೂಪಿಸಿದ್ದಾನೆ. ಪದ್ಮಾವತಿ ಮತ್ತು ಉದಯನರ ವಿವಾಹದ ಒಂದೆರಡು ದಿನಗಳ ನಂತರದಲ್ಲಿ ಪದ್ಮಾವತಿ ತಲೆಶೂಲೆಯಿಂದ ಬಳಲುತ್ತಿರುತ್ತಾಳೆ. ಅವಳನ್ನು ಬೇರೊಂದು ಅಂತಃಪುರದಲ್ಲಿ ವಿಶ್ರಾಂತಿಗಾಗಿ ಕರೆದುಕೊಂಡು ಹೋಗಿರುತ್ತಾರೆ. ಇದನ್ನು ಅರಿಯದ ಉದಯನ ಅವಳನ್ನು ಕಾಣಲು ಅವಳ ಅಂತಃಪುರಕ್ಕೆ ಬರುತ್ತಾನೆ. ಆದರೆ ಅವಳು ಅಲ್ಲಿ ಇರದಿದ್ದನ್ನು ನೋಡಿ ಕಾಯುತ್ತ ಕುಳಿತುಕೊಳ್ಳುವ ಅವನು ಮಧ್ಯಾಹ್ನದ ಸಮಯವಾದ್ದರಿಂದ ಅರಿವಿಲ್ಲದೆ ಅಲ್ಲಿಯೇ ನಿದ್ರೆಹೋಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ವಸಂತಕ ಹೊದಿಕೆ ಹೊದಿಸಿ ಹೋಗುತ್ತಾನೆ. ಆ ಸಮಯದಲ್ಲಿ ವಾಸವದತ್ತೆ ಪದ್ಮಾವತಿಯನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಾಳೆ. ಅವಳಿಗೆ ಉದಯನ ಅಲ್ಲಿ ಮಲಗಿರುವುದು ತಿಳಿಯದೆ ಪದ್ಮಾವತಿಯೇ ಮಲಗಿದ್ದಾಳೆಂದು ಭಾವಿಸಿ ಉದಯನನ ಹಣೆಯನ್ನು ಸ್ಪರ್ಶಿಸುತ್ತಾಳೆ. ತಕ್ಷಣವೇ ಆಕೆಗೆ ಮಲಗಿರುವುದು ಉದಯನ ಎಂಬ ಅರಿವಾಗಿ ಅವಸರದಿಂದ ಹೊರಟು ಹೋಗುತ್ತಾಳೆ. ಆದರೆ ಉದಯನನಿಗೆ ವಾಸವದತ್ತೆಯ ಜೊತೆಯಲ್ಲಿದ್ದಂತೆ ಸ್ವಪ್ನದಲ್ಲಿ ಅನುಭವವಾಗುತ್ತಿರುತ್ತದೆ. ಅಷ್ಟರಲ್ಲೇ ವಾಸವದತ್ತೆಯ ಸ್ಪರ್ಶ ಅವನನ್ನು ಎಚ್ಚರಿಸುತ್ತದೆ. ಆ ಸ್ಪರ್ಶ ವಾಸವದತ್ತೆಯದೇ ಎಂದು ಖಚಿತವಾಗಿ ಭಾವಿಸುವ ಉದಯನ ವಸಂತಕನನ್ನು ಕರೆದು ವಾಸವದತ್ತೆ ಇನ್ನೂ ಜೀವಿಸಿದ್ದಾಳೆ ಎಂದೆಲ್ಲ ಹೇಳುತ್ತಾನೆ. ಅದಕ್ಕೆ ವಸಂತಕ ನಿಮಗೆ ಕೇವಲ ಸ್ವಪ್ನವಾಗಿದೆ. ಇನ್ನೆಲ್ಲಿ ವಾಸವದತ್ತೆ ಬರಲು ಸಾಧ್ಯ. ಇನ್ನು ತಾವು ಪದ್ಮಾವತಿಯ ಬಗ್ಗೆ ಯೋಚಿಸಬೇಕಾಗಿ ಹೇಳುತ್ತಾನೆ. ಆದರೂ ಉದಯನನಲ್ಲಿ ವಾಸವದತ್ತೆ ನಿಸ್ಸಂಶಯವಾಗಿ ಬದುಕಿದ್ದಾಳೆ ಎಂಬ ಭಾವನೆ ಉಳಿದುಬಿಡುತ್ತದೆ.



ಕೊನೆಯ ಅಂಕದಲ್ಲಿ ಮಗಧ ರಾಜನ ಸಹಾಯದಿಂದ ಉದಯನ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತದನಂತರ ಪದ್ಮಾವತಿಯ ಆಶಯದಂತೆ ಅವರಿಬ್ಬರೂ ಆವಂತಿ ರಾಜ್ಯಕ್ಕೆ, ವಾಸವದತ್ತೆಯ ತಂದೆಯ ಮನೆಗೆ ಹೋಗುತ್ತಾರೆ. ಅಲ್ಲಿ ವಾಸವದತ್ತೆಯ ಭಾವ ಚಿತ್ರವನ್ನು ನೋಡುವ ಪದ್ಮಾವತಿ ಚಕಿತಗೊಳ್ಳುತ್ತಾಳೆ. ವಾಸವದತ್ತಾ ಮತ್ತು ತನ್ನ ಪ್ರಿಯ ಸಖಿ ಆವಂತಿಕೆಗೆ ಅತ್ಯಂತ ಹೋಲಿಕೆ ಇದೆ ಎಂಬುದಾಗಿ ಉದಯನನಿಗೆ ಹೇಳುತ್ತಾಳೆ. ಉದಯನ ತಕ್ಷಣ ಆವಂತಿಕೆಯನ್ನು ಬರಲು ಹೇಳುತ್ತಾನೆ. ಆದರೆ ಆವಂತಿಕೆ ಉದಯನನಿದ್ದಲ್ಲಿಗೆ ಬರಲು ಒಪ್ಪದೇ ಪರಪುರುಷನ ದರ್ಶನ ಪತಿಯಿಂದ ದೂರ ಇರುವ ತನಗೆ ತಕ್ಕದ್ದಲ್ಲ ಎಂದು ಪದ್ಮಾವತಿಗೆ ತಿಳಿಸುತ್ತಾಳೆ. ಅಲ್ಲಿಗೆ ಅದೇ ಸಮಯದಲ್ಲಿ ಯೌಗಂಧರಾಯಣ ಸನ್ಯಾಸಿ ವೇಷದಲ್ಲಿ ಬಂದು ಪದ್ಮಾವತಿಯ ಬಳಿ ತನ್ನ ತಂಗಿಯ ಪತಿ ಮರಳಿ ಬಂದಿದ್ದಾನೆ ಆದ್ದರಿಂದ ಕರೆದುಕೊಂಡು ಹೋಗಲು ಬಂದಿದ್ದೇನೆ ಎನ್ನುತ್ತಾನೆ. ಆದರೆ ಉದಯನನು ಯೌಗಂಧರಾಯಣನನ್ನು ಸುಲಭವಾಗಿ ಗುರುತಿಸಿ ಅಪ್ಪಿಕೊಂಡು ಸ್ವಾಗತಿಸುತ್ತಾನೆ. ವಾಸವದತ್ತೆ ಎಲ್ಲಿಯೆಂದು ಕೇಳಿದಾಗ ಆವಂತಿಕಾ ವೇಷದಲ್ಲಿದ್ದ ವಾಸವದತ್ತೆ ಎದುರಿಗೆ ಬರುತ್ತಾಳೆ. ಮತ್ತು ಯೌಗಂಧರಾಯಣ ವಾಸವದತ್ತೆಯನ್ನು ಉದಯನನಿಂದ ದೂರವಿಟ್ಟ ಉದ್ದೆಶವನ್ನೆಲ್ಲ ತಿಳಿಸಿ ಕ್ಷಮೆ ಯಾಚಿಸುತ್ತಾನೆ. ಮತ್ತು ವಾಸವದತ್ತೆ ಇಷ್ಟು ದಿನ ಪದ್ಮಾವತಿಯ ಜೊತೆಯಲ್ಲಿಯೇ ಇದ್ದುದಾಗಿಯೂ ಅವಳು ಪರಿಶುದ್ದಳಾಗಿರುವುದರಿಂದ ಒಪ್ಪಿಕೊಳ್ಳಬೇಕೆಂದೂ ಕೇಳಿಕೊಳ್ಳುತ್ತಾನೆ. ಉದಯನ ಸಂತಸದಿಂದ ವಾಸವದತ್ತೆಯನ್ನು ಸ್ವೀಕರಿಸುತ್ತಾನೆ. ಹೀಗೆ ಸ್ವಪ್ನವಾಸವದತ್ತ ನಾಟಕ ಸುಖಾಂತ್ಯ ಕಾಣುತ್ತದೆ.



ಭಾಸ ಅದ್ಭುತ ನಾಟಕಕಾರ . ಅವನ ನಾಟಕಗಳಲ್ಲಿಯ ಭಾಷೆಯ ಸರಳತೆ ಮತ್ಯಾವ ಸಂಸ್ಕೃತ ನಾಟಕಕಾರರುಗಳಲ್ಲಿ ಕಾಣಬರುವುದಿಲ್ಲ. ಈ ಸಂಬಂಧ ಭಾಸ, ಕಾಳಿದಾಸನನ್ನೂ ಮೀರಿ ನಿಲ್ಲುತ್ತಾನೆ. ಮತ್ತು ಭಾಸನ ಹಾಸ್ಯಪ್ರಜ್ಞೆಯೂ ಅಷ್ಟೇ ಸುಂದರ. ಅದಕ್ಕೇ 'ಭಾಸೋ ಹಾಸಃ' ಎಂಬ ಮಾತು ಪ್ರಸಿದ್ದ. ಭಾಸನೆಂದರೇ ಹಾಸ್ಯ. ಈ ನಾಟಕದಲ್ಲಿ ವಸಂತಕನ ಮೂಲಕ ಅನೇಕ ಹಾಸ್ಯ ಸನ್ನಿವೇಶಗಳನ್ನು ಭಾಸ ಸೃಷ್ಟಿಸಿ ಓದುಗರಲ್ಲಿ ಮುದವನ್ನು ಉಂಟುಮಾಡುತ್ತಾನೆ. ಉದಯನ ವಾಸವದತ್ತೆಯ ವಿರಹದಿಂದ ದುಃಖಗೊಂಡು ಕುಳಿತಾಗ ವಸಂತಕ ಕಥೆಯೊಂದನ್ನು ಹೇಳುತ್ತೇನೆ ಎಂದು ಬರುತ್ತಾನೆ. ಹೀಗೆ ಕಥೆ ಪ್ರಾರಂಭಿಸುತ್ತಾನೆ. ಬ್ರಹ್ಮದತ್ತ ಎಂಬ ನಗರಿಯಲ್ಲಿ ಕೌಶಾಂಬಿ ಎಂಬ ರಾಜನಿದ್ದನು. ತಕ್ಷಣ ದುಃಖತಪ್ತನಾದ ಉದಯನ ತಲೆಯೆತ್ತಿ ನಗಲು ಆರಂಭಿಸುತ್ತಾನೆ. ಮತ್ತು ವಸಂತಕನನ್ನು ಕುರಿತು 'ಮೂರ್ಖ, ಅದು ಕೌಶಾಂಬಿ ನಗರಿ, ಅಲ್ಲಿನ ರಾಜ ಬ್ರಹ್ಮದತ್ತ ! ' ಎಂದು ಹೇಳುತ್ತಾನೆ. ಹೀಗೆ ಭಾಸ ಬೇಸರದ ಮತ್ತು ಶುಷ್ಕವೆನಿಸುವ ಸನ್ನಿವೇಶಗಳನ್ನು ತನ್ನ ಹಾಸ್ಯ ಪ್ರಜ್ಞೆಯಿಂದ ತಕ್ಷಣ ರಂಜನೀಯವಾಗಿ ಮಾಡಿಬಿಡುತ್ತಾನೆ.



ಭಾಸನ ಕಾವ್ಯಭಾಷೆಗೆ ತನ್ನದೇ ಆದ ಒಂದು ವಿಶಿಷ್ಟ ಸ್ವಂತಿಕೆ ಇದೆ. ಅವನು ಕಾವ್ಯದಲ್ಲಿ ತನ್ನ ಹಿಂದಿನ ಕವಿಗಳ ಯಾರ ಮಾತುಗಳನ್ನೂ ಉದ್ದರಿಸುವುದಿಲ್ಲ.ಅವನ ಕಥೆ ಹೇಳುವಲ್ಲಿನ ಚಾಕಚಕ್ಯತೆಯೂ ಅಸಾಧಾರಣವಾದುದು. ಈ ಪ್ರಸ್ತುತ ನಾಟಕದಲ್ಲಿಯೇ ನೋಡಿದರೆ ಅವನು ತನ್ನ ನಾಟಕದಲ್ಲಿ ಮಾಡಿದ ಆಧುನಿಕ ಪ್ರಯೋಗಗಳು ಅಚ್ಚರಿಯನ್ನುಂಟುಮಾಡುತ್ತವೆ. ನೇರ ಸಂಭಾಷಣೆ ಮತ್ತು ಸನ್ನಿವೇಶಗಳನ್ನು ವಿವರವಾಗಿ ಬಣ್ಣಿಸುವ ಭಾಸನ ಶೈಲಿ ಎಲ್ಲಿಯೂ ನಿಸ್ಸಾರ ಅನ್ನಿಸುವುದಿಲ್ಲ. ಈ ಕಾರಣದಿಂದಾಗಿಯೇ ಭಾಸನ ನಾಟಕಗಳು ರಂಗದ ಮೇಲೆ ರಂಜನೀಯವಾಗಿ ಮೂಡಿಬರುತ್ತವೆ. ಕೇರಳದಲ್ಲಿ ಇತ್ತೀಚಿನ ಭಾಸನ ನಾಟಕಗಳ ರಂಗಪ್ರಯೋಗ ಅತ್ಯಂತ ಜನಪ್ರಿಯ ಮತ್ತು ಸಫಲಗೊಂಡಿವೆ. ಹೀಗೆ ಇಂದಿಗೂ ಭಾಸ ಸಹೃದಯರನ್ನು ತನ್ನ ಕಾವ್ಯಗಳತ್ತ ಸೆಳೆಯುತ್ತಿದ್ದಾನೆ.

5 comments:

  1. ಗೋದಾವರಿ,
    ಭಾಸನ ನಾಟಕೀಯ ಪ್ರಜ್ಞೆ ಬೇರಾವ ನಾಟಕಕಾರರಲ್ಲೂ ಕಾಣದು.
    ಸಂಸ್ಕೃತದ ಇತರ ನಾಟಕಗಳನ್ನೂ ಸಹ ಪರಿಚಯಿಸಿರಿ ಎಂದು ನನ್ನ ಕೋರಿಕೆ.

    ReplyDelete
  2. ಭಾಸನ "ಸ್ವಪ್ನವಾಸವದತ್ತ" ನಾಟಕದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ. ಅವನ "ಪ್ರತಿಮಾ "ನಾಟಕದ ಬಗ್ಗೆಯೂ ಬರೆಯಿರಿ.

    ReplyDelete
  3. ಗೋದಾವರಿಯವರೆ...

    ಭಾಸ ಕವಿಯ ನಾಟಕದ ಪ್ರಜ್ಞೆ ಬೆರಗು ಮೂಡಿಸುತ್ತದೆ..

    ಬಹಳ ಆಳವಾಗಿ ವಿಶ್ಲೇಷಿಸಿದ್ದೀರಿ

    ಭಾಸ ಕವಿಯ ಬಗೆಗೆ ನನಗೇನೂ ಗೊತ್ತಿಲ್ಲವಾಗಿತ್ತು...
    ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  4. ಗೋದಾವರಿ ಮೇಡಮ್,

    ಭಾಸನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ...ಕಾಳಿದಾಸನ ಸಮಕಾಲೀನರ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಆತನ ನಾಟಕದ ಬಗ್ಗೆ ಅದರಲ್ಲಿ ಬರುವ ಪಾತ್ರಗಳ ಬಗ್ಗೆ ಒಂದು ಸುಂದರ ವಿಶ್ಲೇಷಣೆಯನ್ನು ನೀಡಿದ್ದೀರಿ..ಧನ್ಯವಾದಗಳು

    ReplyDelete
  5. ಒಳ್ಳೆಯ ಬರಹ..ಮೇಡಂ.
    -ಧರಿತ್ರಿ

    ReplyDelete