Friday, September 24, 2010

ವಿಜ್ಞಾನ ಮತ್ತು ಆಧ್ಯಾತ್ಮ

(ಫ್ರಿತ್ಜೋಫ್ ಕಾಪ್ರಾನ ’ದಿ ತಾವೋ ಆಫ್ ಫಿಸಿಕ್ಸ’, ಪೂರ್ವದ ಆಧ್ಯಾತ್ಮ ಮತ್ತು ಆಧುನಿಕ ಭೌತ ಶಾಸ್ತ್ರದ ಬಗೆಗಿನ ಸಾಮ್ಯತೆಗಳ ಕುರಿತಾಗಿ ಬರೆದ ಆಸಕ್ತಿದಾಯಕ ಪ್ರಬಂಧ. ಸ್ವತಃ ಭೌತಶಾಸ್ತ್ರದ ಸಂಶೋಧಕನಾದ ಕಾಪ್ರಾನ ಪೂರ್ವದ ಆಧ್ಯಾತ್ಮಮಾರ್ಗಗಳ ಬಗೆಗಿನ ಆಳವಾದ ಜ್ಞಾನ ಆಶ್ಚರ್ಯ ಹುಟ್ಟಿಸುವಂಥದ್ದು. ಪೂರ್ವದ ಆಧ್ಯಾತ್ಮ ಮಾರ್ಗವನ್ನು ’ತಾವೋ’ ಎಂಬುದಾಗಿ ಕಾಪ್ರ ತನ್ನ ಪ್ರಬಂಧದ ತಲೆಬರಹದಲ್ಲಿ ಬಳಸಿದ್ದಾನೆ. ಭೌತ ಶಾಸ್ತ್ರದ ಬಗೆಗೆ ಸರಳವಾಗಿ ವಿಜ್ಞಾನದ ಅಧ್ಯಯನದ ಹಿನ್ನಲೆಯಿರದವರಿಗೂ ಅರ್ಥವಾಗುವ ಹಾಗೆ ಬರೆಯಲ್ಪಟ್ಟ ಪುಸ್ತಕಗಳಲ್ಲಿ ’ದಿ ತಾವೋ ಆಫ ಫಿಸಿಕ್ಸ್’ ಕೂಡ ಒಂದು ಎನ್ನಬಹುದು. ಈ ಪುಸ್ತಕ ಓದುಗರನ್ನು ಆಧ್ಯಾತ್ಮ ಮತ್ತು ವಿಜ್ಞಾನದ ಬಗೆಗೆ ಹೊಸ ದಿಶೆಯಲ್ಲಿ ಯೋಚಿಸುವಂತೆ ಮಾಡುತ್ತದೆ.)

ವಿಜ್ಞಾನ ನಮ್ಮ ಅಸ್ತಿತ್ವದ ಮೇಲೆ ತೀರ ಗಾಢವಾದ ಪ್ರಭಾವ ಬೀರಿದೆ. ಇದಕ್ಕೆ ಕಾರಣ ವಿಜ್ಞಾನ, ಮತ್ತು ತಂತ್ರಜ್ಞಾನಗಳು ನಮ್ಮ ಬದುಕನ್ನು ವಿವಿಧ ಸಾಧನ ಸೌಕರ್ಯಗಳಿಂದ ಸುಲಭ ಹಾಗೂ ವ್ಯವಸ್ಥಿತಗೊಳಿಸಿರುವುದು. ನಮ್ಮ ನಿತ್ಯ ಜೀವನದಲ್ಲಿ ತಂತ್ರಜ್ಞಾನಗಳ ವ್ಯಾಪಕ ಬಳಕೆಯಿಂದಾಗಿ, ವಿಜ್ಞಾನದ ಉದ್ದೇಶವೇ ನಿರಂತರ ಹೊಸ ಹೊಸ ತಂತ್ರಜ್ಞಾನಗಳ ಶೋಧನೆ, ಎಂಬ ಭಾವನೆ ಬಳೆದುಬಂದಿದೆ. ಆದರೆ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯು ಇಂತಹ ಅನೇಕ ತಿಳುವಳಿಕೆಗಳನ್ನು ಬದಲಾಯಿಸಿದೆ. ವಿಜ್ಞಾನ ಕೇವಲ ತಂತ್ರಜ್ಞಾನವಷ್ಟೇ ಅಲ್ಲ, ಅದಕ್ಕೂ ಮೀರಿದ್ದು. ಹಾಗೂ ವಿಜ್ಞಾನ ಒಬ್ಬ ವ್ಯಕ್ತಿಯಲ್ಲಿನ ಬ್ರಹ್ಮಾಂಡದ ಬಗೆಗಿನ ಆಳವಾದ ಪ್ರಜ್ಞ್ನೆ ಮತ್ತು ಅದರೊಡಗಿನ ತನ್ನ ಒಡನಾಟದ ಅರಿವಿಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟ ಪಡಿಸಿದೆ. ವಿಜ್ಞಾನ ವ್ಯಕ್ತಿಯ, ಬಾಹ್ಯ ಜೀವನವನ್ನಷ್ಟೇ ಅಲ್ಲದೆ ಅವನ ಆಂತರಿಕ ಹರಿವನ್ನೂ ಪ್ರಭಾವಿಸುವಂಥದ್ದು ಎನ್ನುತ್ತದೆ ಆಧುನಿಕ ಭೌತಶಾಸ್ತ್ರ. ಹಾಗಿದ್ದರೆ ವಿಜ್ಞಾನ ಅಧ್ಯಾತ್ಮದ ಮಾರ್ಗದಂತೆ ಮಾನವ ಜೀವನವನವನ್ನು ಶ್ರ‍ೇಷ್ಠತೆಯತ್ತ ಕೊಂಡೊಯ್ಯುವ ದಾರಿಯೇ?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ’ದಿ ತಾವೋ ಆಫ್ ಫಿಸಿಕ್ಸ’. ಆಧುನಿಕ ಭೌತಶಾಸ್ತ್ರದ ಹುಟ್ಟು, ಹೈಸನ್ ಬರ್ಗ್ ಎಂಬ ವಿಜ್ಞಾನಿಯ ಅಣುವಿನ ಡ್ಯುಯೆಲ್ ಗುಣದ ಕುರಿತಾದ ಸಂಶೋಧನೆಯಿಂದಾಯಿತು. ಹೈಸನ್ ರ ಪ್ರಕಾರ ಅಣುವೊಂದಕ್ಕೆ ಎರಡು ಗುಣವಿದೆ. ಒಂದು ಸ್ಥಿರ, ಇನ್ನೊಂದು ಅಲೆಯ ಗುಣ. ಎಲ್ಲ ಪದಾರ್ಥಗಳೂ ಅಣುವಿನಿಂದ ಮಾಡಲ್ಪಟ್ಟಿರುವುದರಿಂದ, ಎಲ್ಲವೂ ಈ ಎರಡು ಗುಣಗಳಿಂದಲೇ ಕೂಡಿವೆ. ನಮಗೆ ವಸ್ತುಗಳು ಸ್ಥಿರವಾಗಿರುವುದಾಗಿ ಕಂಡುಬಂದರೂ, ಅವೆಲ್ಲವೂ ಅಲೆಯ ಸ್ಥಿತಿಯನ್ನೂ ಹೊಂದಿವೆ. ಈ ಸಂಶೋಧನೆಯು ಶಾಸ್ತ್ರೀಯ (Classical Physics) ಭೌತಶಾಸ್ತ್ರದ ದಿಕ್ಕನ್ನೇ ಬದಲಿಸಿತು. ಇದು ಭೌತಶಾಸ್ತ್ರದಲ್ಲಿನ ವಿಶ್ವ ಹಾಗು ಅದರ ರಚನೆ, ಸೃಷ್ಟಿಗೆ ಸಂಬಂಧಿಸಿದ ತಿಳುವಳಿಕೆಗಳ ಮೇಲೆ ಅಗಾಧ ಪರಿಣಾಮ ಬೀರಿತು. ಅಲ್ಲದೆ ಈ ಬದಲಾವಣೆಯಿಂದಾಗಿ ವಿಜ್ಞಾನ ಹಾಗೂ ಪೂರ್ವದ ಆಧ್ಯಾತ್ಮ ಜಗತ್ತಿನ ಸಾಮ್ಯತೆಗಳು ಗೋಚರಿಸಿದವು.

ಭೌತಶಾಸ್ತ್ರದ ಸಂಶೋಧಕನಾದ ಕಾಪ್ರಾನು ವೇದೋಪನಿಷತ್ತುಗಳ ಉಕ್ತಿಗಳನ್ನು ಕಂಡು ಬೆರಗಾಗುತ್ತಾನೆ. ಕಾಪ್ರಾ, ಒಬ್ಬ, ಆಧುನಿಕ ಭೌತಶಾಸ್ತ್ರದ ವಿಜ್ಞಾನಿ ಮತ್ತು ಒಬ್ಬ ಪೂರ್ವದ ಸಾಧಕ ಬ್ರಹ್ಮಾಂಡವನ್ನು ನೋಡುವ ಪರಿ ಎರಡೂ ಒಂದೇ ಎನ್ನುತ್ತಾನೆ. ನೀಲ್ಸ ಬೋರ್, ಹೈಸನ್ ಬರ್ಗ್ ರಂತಹ ವಿಜ್ಞಾನಿಗಳು ವಿಶ್ವದ ಬಗ್ಗೆ ಹೇಳಿದ ಮಾತುಗಳು ತದಾವತ್ತಾಗಿ ಉಪನಿಷತ್ತುಗಳ ಉಕ್ತಿಗಳನ್ನು ಹೋಲುತ್ತವೆ ಎನ್ನುತ್ತಾನೆ. ಆಧುನಿಕ ಭೌತಶಾಸ್ತ್ರದ ಆವಿಷ್ಕಾರಗಳು ಹೊಸದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಪೂರ್ವದ ನಾಗರೀಕತೆಗಳು ಈ ಸತ್ಯವನ್ನು ಅರಿತಿದ್ದವು ಎಂಬ ಅಭಿಪ್ರಾಯವನ್ನು ತನ್ನ ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾನೆ. ಗ್ರೀಕ್, ರೋಮನ್ ನಂತಹ ಪಶ್ಚಿಮದ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಇಂತಹ ಸಾಮ್ಯತೆಗಳು ಇರುವುದಾಗಿ ಕಂಡುಬಂದರೂ ಅವು ಪೂರ್ವದ ಆಧ್ಯಾತ್ಮದಷ್ಟು ವಿಕಾಸವಾದಂತೆ ತೋರುವುದಿಲ್ಲ. ಪೂರ್ವದ ಗುರುಕುಲ ವ್ಯವಸ್ಥೆಯಿಂದಾಗಿ ಅಲ್ಲಿಯ ಆಧ್ಯಾತ್ಮ ಪರಂಪರೆ ಅತ್ಯಂತ ಪ್ರಬುದ್ಧತೆಯನ್ನು ಪಡೆಯಲು ಸಾಧ್ಯವಾಯಿತು, ಇದರಿಂದಾಗಿ ಪೂರ್ವದ ಸಂಸ್ಕೃತಿಯು ಜಗತ್ತಿನಲ್ಲಿಯ ಎಲ್ಲ ನಾಗರೀಕತೆಗಳಿಗಿಂತಲೂ ಅಪೂರ್ವವಾದದ್ದು ಎನ್ನುತ್ತಾನೆ.

ಆಧ್ಯಾತ್ಮ ಮನುಷ್ಯನನ್ನು ತನ್ನ ಆಂತರ್ಯದತ್ತ ಸೆಳೆಯುವಂತೆ, ವಿಜ್ಞಾನವೂ ಮನುಷ್ಯನನ್ನು ಪ್ರಭಾವಿಸಬಲ್ಲ ಸಾಧ್ಯತೆ ಹೊಂದಿದೆ. ಈ ವಿಶ್ವವೇ ಅಲೆಯ ರೂಪದಲ್ಲಿದೆ ಎಂಬ ಆಧುನಿಕ ವಿಜ್ಞಾನದ ತರ್ಕ, ಹಾಗೂ ನಮ್ಮ ಉಪನಿಷತ್ತುಗಳು ಹೇಳುವ ವಿಶ್ವವೇ ಒಂದು ಲಯಬದ್ಧವಾದ ವ್ಯವಸ್ಥೆ, ಎಂಬ ಮಾತುಗಳು ಒಂದೇ ಅಲ್ಲವೇ. ವ್ಯವಸ್ಥಿತವಾದ ಕಂಪನವೇ ವಿಶ್ವವನ್ನು ನಿಯಂತ್ರಿಸುತ್ತಿದೆ ಎಂದು ವಿಜ್ಞಾನ ಹೇಳಿದರೆ, ನಾವು ಪೂಜಿಸುವ ನೃತ್ಯ ದೇವತೆ ನಟರಾಜನೇ ವಿಶ್ವದ ಲಯಕರ್ತ ಎಂದು ನಮ್ಮ ಆಧ್ಯಾತ್ಮ ಹೇಳುತ್ತದೆ. ವಿಜ್ಞಾನ ಮತ್ತು ಆಧ್ಯಾತ್ಮಗಳು ಹೇಳುತ್ತಿರುವ ಸತ್ಯವೊಂದೇ, ಕೇವಲ ಅವುಗಳ ದೃಷ್ಟಿಕೋನಗಳು ಮಾತ್ರ ಬೇರೆ ಬೇರೆ. ಹಾಗಿದ್ದಲ್ಲಿ ವಿಜ್ಞಾನವೂ ಆಧ್ಯಾತ್ಮದಂತೆಯೇ ಹೃದಯವುಳ್ಳ ಹಾದಿ ಎಂಬುವಲ್ಲಿ ಸಂಶಯವಿಲ್ಲ.

ಆದರೆ ಕಾಪ್ರ ತನ್ನ ಪ್ರಬಂಧದಲ್ಲಿ ಒಂದು ಮುಖ್ಯವಾದ ವಿಷಯವೊಂದನ್ನು ಪ್ರಸ್ತಾಪಿಸಲಿಲ್ಲ ಎಂದು ನನಗೆ ಅನ್ನಿಸುತ್ತದೆ. ಯಾವ ಮಾರ್ಗವೂ, ತನ್ನಷ್ಟಕ್ಕೆ ತಾನೇ ನಡೆದು ಒಬ್ಬ ವ್ಯಕ್ತಿಯ ಅರಿವನ್ನೋ, ಬಾಳನ್ನೋ ಬೆಳಗಿಸುವುದಿಲ್ಲ. ಹಾದಿಯು ಕೇವಲ ಹಾದಿಯಷ್ಟೇ. ಪಯಣ ವ್ಯಕ್ತಿ ತಾನು ಸ್ವತಃ ಮಾಡಬೇಕು. ಆದರೂ ಹಾದಿಯೂ ತನ್ನಲ್ಲಿಯ ಪಯಣವನ್ನು ನಿರ್ಧರಿಸುವ ಮಾರ್ಗದರ್ಶಿ ಕೂಡ. ಹಾಗೆ ಭಾವಿಸಿದರೆ, ವಿಜ್ಞಾನ ಆಧ್ಯಾತ್ಮ ದಂತೆಯೇ ಮಾನವನ ಜೀವನವನ್ನು ಬೆಳಗಿಸುವ ದಾರಿಯಾಗಿದ್ದಲ್ಲಿ, ಆಧ್ಯಾತ್ಮ ಸಾವಿರಾರು ವರುಷಗಳ ಹಿಂದೆಯೇ ಅರಿತ ಸತ್ಯವನ್ನು ಇಷ್ಟು ವರುಷಗಳ ನಂತರವೂ ವಿಜ್ಞಾನದ ಮಾರ್ಗ ಅರಿಯುವಲ್ಲಿ ಯಾಕೆ ವಿಫಲವಾಗುತ್ತಿದೆ? ಎಂಬ ಪ್ರಶ್ನೆಯ ಬಗ್ಗೆ ಕಾಪ್ರಾ ಚರ್ಚಿಸುವುದಿಲ್ಲ. ಅದಕ್ಕೆ ಉತ್ತರರವನ್ನು ಆಧ್ಯಾತ್ಮ ನೀಡುತ್ತದೆ. ವಿಜ್ಞಾನ, ಸುವ್ಯವಸ್ಥಿತವಾದ ಜ್ಞಾನ. ವಿಜ್ಞಾನ ತನ್ನ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಅನುಸರಿಸುವ ವಿಧಾನವಂದರೆ, ಆ ಪ್ರಶ್ನೆಯನ್ನು ಸಣ್ಣ ಪ್ರಶ್ನೆಗಳನ್ನಾಗಿ ಒಡೆದು,ಆ ಸಣ್ಣ ಪ್ರಶ್ನೆಗಳಿಗೆ ಉತ್ತರ ಹುಡುಕಿ, ಆ ಉತ್ತರಗಳಿಂದ ಮೂಲ ಪ್ರಶ್ನೆಯನ್ನು ಬಗೆಹರಿಸುವುದು. ಆದರೆ, ಈ ಒಡೆದು (Divide and Rule) ಸತ್ಯವನ್ನರಿಯುವ ಪ್ರಯತ್ನವು ಮೂಲ ಪ್ರಶ್ನೆಯನ್ನು ಬಗೆಹರಿಸುವುದಿಲ್ಲ ಎಂದು ಆಧ್ಯಾತ್ಮ ಹೇಳುತ್ತದೆ. ಏಕೆಂದರೆ ನಮ್ಮ ವಿಶ್ವವು ಸಂಯೋಜನೆಯಿಂದಾಗಿದೆ. ಈ ಅಸ್ತಿತ್ವವು ಪೂರ್ಣ ರೂಪದ್ದು, ಸಮನ್ವಯವಾದದ್ದು. ಆದುದರಿಂದ ಪದಾರ್ಥಗಳ ಅಸ್ತಿತ್ವವನ್ನು ಅವುಗಳ ಪೂರ್ಣರೂಪದಿಂದಲೇ ಅರಿಯಬೇಕು. ವಿಭಜನೆಯಿಂದ ಅರಿವು ಸಾಧ್ಯವಿಲ್ಲ ಎಂಬುದು ಆಧ್ಯಾತ್ಮ ಮಾರ್ಗದ ನಿಲುವು. ಆದುದರಿಂದಲೇ ವಿಜ್ಞಾನಕ್ಕೆ ವಿಶ್ವವನ್ನು ಅರಿಯುವ ಪ್ರಯತ್ನ, ಇನ್ನೂ ಪ್ರಯತ್ನವಾಗಿಯೇ ಉಳಿದಿದೆ.

Monday, February 1, 2010

ಒಂದು ಭಕ್ತಿಕಾವ್ಯವಾಗಿ ಗದುಗಿನಭಾರತ

ಕುಮಾರವ್ಯಾಸ ಲಿಖಿತ ಗದುಗಿನ ಭಾರತ ಅಥವಾ ’ಕರ್ಣಾಟಕ ಭಾರತ ಕಥಾಮಂಜರಿ’ ಸತ್ವದಲ್ಲಿಯೂ ಹಾಗೂ ಗಾತ್ರದಲ್ಲಿಯೂ ಅಸಾಮಾನ್ಯವಾದ ಕನ್ನಡ ಸಾಹಿತ್ಯ ಜಗತ್ತಿನ ಅಗ್ರಗಣ್ಯ ಕಥನಕಾವ್ಯ. ಕನ್ನಡದ ಸಾಹಿತ್ಯ ತಜ್ಞರಲ್ಲಿ ಕುಮಾರವ್ಯಾಸ ಭಾರತದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಮೊದಲನೆಯದು, ಕುಮಾರವ್ಯಾಸ ಹೇಳುವ ಕಥೆಯು ವ್ಯಾಸರ ಸಂಸ್ಕೃತ ಮಹಾಭಾರತದ ಅನುವಾದ ಮತ್ತು ಎರಡನೆಯ ಅಭಿಪ್ರಾಯ ಇದು ಒಂದಿಷ್ಟು ಕಥೆಗಳ ಹೆಣಿಕೆ ಎಂಬುದಾಗಿ. ಅದೇನೇ ಇದ್ದರೂ ಗದುಗಿನಭಾರತವು ಒಂದು ಭಕ್ತಿಯ ಮಹಾಕಾವ್ಯ ಎಂಬ ಅಭಿಮತಕ್ಕೆ ತಜ್ಞರಲ್ಲಿ ಎರಡಭಿಪ್ರಾಯವಿಲ್ಲ. ಭಕ್ತಕವಿಗಳಲ್ಲಿ ಕುಮಾರವ್ಯಾಸನು ಶ್ರೇಷ್ರ‍್ಠನು. ಕುಮಾರವ್ಯಾಸ ಭಾರತವು ಭಾಮಿನೀ ಷಟ್ಪದಿಯಲ್ಲಿ ರಚಿಸಲ್ಪಟ್ಟಿದೆ. ಜನಸಾಮಾನ್ಯರ ಆಡು ಮಾತಿಗೆ ಹತ್ತಿರವಾದ ಭಾಷೆಯಲ್ಲಿ ವ್ಯಾಸರ ದಶಪರ್ವಗಳನ್ನೂ ಕನ್ನಡಕ್ಕೆ ಕುಮಾರವ್ಯಾಸನು ಅನುವಾದಿಸಿದ್ದಾನೆ. ಆದರೆ, ವ್ಯಾಸಭಾರತದ ರಾಜಮನೆತನಗಳ ದಾಯಾದಿ ಕಲಹದ, ಬಹುಪಾಲು ವೀರರಸದ ಈ ಕಥೆಯು, ಕನ್ನಡದಲ್ಲಿ ಒಂದು ಭಕ್ತಿ ಕಥನವಾಗಿಹೋಗಿದೆ.

ಕುಮಾರವ್ಯಾಸನು ತಾನು ಮಹಾಭಾರತದ ಕಥೆಯನ್ನೇ ಯಾಕೆ ಬರೆಯುತ್ತೇನೆ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಆಡಿದಮಾತು ತರ್ಕಬದ್ಧ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ರಾಶಿ ರಾಶಿಯಾದ ರಘುವರನ ಚರಿತೆಯಲಿ ಕಾಲಿಡಲು ತೆರಪಿಲ್ಲ.’ ಆದುದರಿಂದ ತಾನು ’ಮಗನೆಂದೊಲಿದ’ ವ್ಯಾಸರಿಗೆ ಕುಮಾರನೆನಿಸಿಕೊಂಡು, ’ಹರಿಕಥಾಮೃತವೆಂಬ ಭಾರತ ವರ ಕಥೆಯ’ ರಚಿಸತ್ತೇನೆ ಎನ್ನುತಾನೆ. ಅವನ ಈ ಮಾತಿನಲ್ಲಿ ಭಾರತವೆಂದರೆ ಕುಮಾರವ್ಯಾಸನಿಗೆ ಹರಿಕಥನವೇ ಎಂಬುದು ಸ್ಪಷ್ಟವಾಗುತ್ತದೆ. ಅತ್ಯಂತ ಪ್ರೌಢ ರಸವೆನಿಸಿದ ಭಕ್ತಿರಸ ಪ್ರಧಾನವಾದ ಕುಮಾರವ್ಯಾಸ ಕಾವ್ಯವು ’ಕಾವ್ಯಕ್ಕೆ ಗುರು’. ಭಾಷಾ ದೃಷ್ಟಿಯಿಂದ ಮತ್ತು ಇಲ್ಲಿ ಉಲ್ಲೇಖಿಸಲ್ಪಟ್ಟ ಉದಾತ್ತವಾದ ಜೀವನದರ್ಶನದಿಂದಲೂ ಗದುಗಿನ ಭಾರತವು ಚಮತ್ಕಾರಯುತವಾದದ್ದು. ಇಂತಹ ಅದ್ಭುತ ಕಾವ್ಯದಲ್ಲಿನ ಭಕ್ತಿಯ ಪರಿಯನ್ನು ಅರಿಯುವ ಹಾಗೂ ಪರಿಚಯಿಸುವ ಉದ್ದೇಶದಿಂದಾಗಿ ಈ ಸಂಕ್ಷಿಪ್ತ ಲೇಖನ.

ಕುಮಾರವ್ಯಾಸನ ನಿಜವಾದ ಹೆಸರು ನಾರಣಪ್ಪ. ಈತನು ಗದುಗಿನ ಕೋಳಿವಾಡದ ಪ್ರದೇಶದವನು ಎಂಬುದಾಗಿ ಇತಿಹಾಸಕಾರರು ಹೇಳುತ್ತಾರೆ. ಆದರೆ ಕವಿಯು, ತಾನು ಗದುಗಿನ ವೀರನಾರಾಯಣನ ಪರಮ ಭಕ್ತನೆಂಬುದೊಂದನ್ನು ಬಿಟ್ಟರೆ, ತನ್ನ ಬಗ್ಗೆ ಹೆಚ್ಚಿನದಾಗಿ ಎನನ್ನೂ ತನ್ನ ಕೃತಿಯಲ್ಲಿ ಹೇಳಿಕೊಂಡಿಲ್ಲ. ಮತ್ತು ವೀರನಾರಯಣನೇ ಕವಿ ಎಂತಲೂ ತಾನು ಕೇವಲ ಲಿಪಿಗಾರ ಮಾತ್ರನು ಎಂಬುದಾಗಿ ಹೇಳಿಕೊಳ್ಳುತ್ತಾನೆ.

ಕುಮಾರವ್ಯಾಸನಿಗೆ ಮಹಾಭಾರತವೆಂಬುದೇ ಒಂದು ’ಕೃಷ್ಣ ಕಥೆ’.
"ತಿಳಿಯಹೇಳುವೆ ಕೃಷ್ಣಕಥೆಯನು,
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ. "

ಕುಮಾರವ್ಯಾಸ ಕಾವ್ಯ ಪ್ರಯತ್ನವೂ ಶ್ರೀ ಕೃಷ್ಣನ ಮೆಚ್ಚುಗೆಗಾಗಿಯೇ. ಅದಕ್ಕೇ ಹೇಳುತ್ತಾನೆ ’ತುಳಸಿಯ ಉದಕ’ ಬರೆಯ ನೀರು ಎಂದು ತೋರಿದರೂ ಅದು ಪಾವನ. ಅಂತೆಯೇ ಶ್ರೀ ಕೃಷ್ಣನ ಕಥೆಯಿಂದಾಗಿಯೇ ಕುಮಾರವ್ಯಾಸನ ಕಾವ್ಯ ಪಾವನ. ಪದುಮನಾಭನ ಮಹಿಮೆಯ ಹೊರತಾಗಿ ಮಹಾಭಾರತದಲ್ಲಿ ಮತ್ತ್ಯಾವುದೂ ಕವಿಗೆ ಹೆಚ್ಚಿನದಲ್ಲ. ಶ್ರೀ ಕೃಷ್ಣನೇ ಈ ಕಥೆಯ ಸೂತ್ರಧಾರ. ಆ ದೃಷ್ಟಿಯಿಂದಲೇ ಕವಿ ಭಾರತವನ್ನು ರಚಿಸಿದ್ದಾನೆ. ಭಾರತವಾದರೋ ಪಾಂಡವರ ಕಥೆ. ಪಾಂಡವರು ಕೃಷ್ಣನಿಗೆ ಪ್ರಿಯರು. ಅವರ ಪತ್ನಿ ದ್ರೌಪದಿ ಕೃಷ್ಣನಿಗೆ ತಂಗಿ. ಕುಂತಿ ಅತ್ತೆ. ಭೀಷ್ಮ ದ್ರೋಣಾದಿ ವಿದುರರು ಪರಮ ಭಕ್ತರು. ಕರ್ಣ ದುರ್ಯೋಧನರು ಅಂತ್ಯಕಾಲದಲ್ಲಿ ಕೃಷ್ಣನಿಗೇ ಶರಣಾಗುತ್ತರೆ. ಹೀಗೆ ಭಾರತದ ಎಲ್ಲಾ ಪಾತ್ರಗಳೂ ಶ್ರೀ ಕೃಷ್ಣನ ಸುತ್ತಲೂ ಭ್ರಮಿಸುತ್ತವೆ. ಕುಮಾರವ್ಯಾಸನು ಭಕ್ತಿಯ ಬೇರೆ ಬೇರೆ ಮಾದರಿಗಳೆನಿಸುವಂತೆ ದ್ರೌಪದಿ, ಪಾರ್ಥ, ಭೀಷ್ಮ, ವಿದುರ, ದ್ರೋಣ, ಧರ್ಮರಾಯ ಹೀಗೆ ಎಲ್ಲರ ಪಾತ್ರಗಳನ್ನು ಚಿತ್ರಿಸಿದ್ದಾನೆ. ಮತ್ತು ತನ್ನ ಭಕ್ತಿಯನ್ನು ಎಲ್ಲ ಪರಿಗಳನ್ನು ಈ ಪಾತ್ರಗಳಲ್ಲಿ ಹೊರಹೊಮ್ಮಿಸಿದ್ದಾನೆ.

ಕುಮಾರವ್ಯಾಸನು ತನ್ನ ನಾರಾಯಣನು ಭಗವಂತನಾದರೂ ಮಾನವ ಸಹಜರಲ್ಲಿ ಒಂದು ಗೂಡಿ ತಾನೂ ಒಂದು ಪಾತ್ರವಹಿಸಿರುವಂತೆ ಚಿತ್ರಿಸುತ್ತಾನೆ. ಸೋದರತ್ತೆಯಾದ ಕುಂತಿಗೆ ತಾನು ಕಿರಿಯನೆಂಬುವಂತೆ ನಮಸ್ಕರಿಸುತ್ತಾನೆ. ಪಾರ್ಥನನ್ನು ತನ್ನ ಅತ್ಯಾಪ್ತ ಸ್ನೇಹಿತನಂತೆ ಕಾಣುತ್ತಾನೆ. ಆತನಿಗೆ ದ್ರೌಪದಿಯಲ್ಲಿ ತಂಗಿಯೆಂಬ ಮಮತೆ. ಪಾಂಡವರೈವರು ತನ್ನ ಪ್ರಾಣಸಮಾಸರು ಎನ್ನುತ್ತಾನೆ. ವಿದುರ ಭೀಷ್ಮರನ್ನು ಹಿರಿಯರಂತೆ ಗೌರವದಿಂದ ಕಾಣುತ್ತಾನೆ. ’ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದ ಹರಿ’, ಎಂದರೆ ತನ್ನ ಮಹಿಮೆಯನ್ನು ಮರೆಯಿಸಿ ಇಹ ಲೋಕದ ಬಗೆಯನ್ನನುಸರಿಸಿ ತಾನೂ ನರನೆಂಬುವಂತೆ ನಟಿಸಿದನು ಎಂಬುದನ್ನು ಕುಮಾರವ್ಯಾಸ ಕಾವ್ಯದುದ್ದಕ್ಕೂ ಎತ್ತಿತೋರಿಸಿದ್ದಾನೆ. ಆದರೆ ನರಹರಿಯು ’ಕೊಂದು ಹಗೆಯಲ್ಲ, ಸಲಹಿದನೆಂದು ಮೋಹಿತನಲ್ಲ’. ಎಂಬುದನ್ನೂ ಕುಮಾರವ್ಯಾಸ ಹೇಳುತ್ತಾನೆ. ಶ್ರ‍ೀ ಕೃಷ್ಣನು ಪಾಂಡವರಿಗೆ ಆಪ್ತನಾದರೂ ಅವರಲ್ಲಿ ಮೋಹವಿಲ್ಲ ಅವನಿಗೆ. ಕೌರವರನ್ನು ಪಾಂಡವರಿಂದ ಸೆದೆಬಡಿಸಿದರೂ ಆತನಿಗೆ ಕೌರವರಲ್ಲಿ ದ್ವೇಷವಿಲ್ಲ. ನಾರಾಯಣನು ತಾನೇ ಸಕಲವೂ (ಸೃಷ್ಟಿಕರ್ತನೂ ಮತ್ತು ಸೃಷ್ಟಿಯೂ)ಆಗುತ್ತಾನೆ. ಮತ್ತು ಅದರಿಂದ ತಾನು ಅಲಿಪ್ತನಾಗಿ ಉಳಿಯುವುದೇ ಅವನ ಲೀಲೆ.

ಆದಿಪರ್ವದಲ್ಲಿ ಪಾಂಡವರ ಮತ್ತು ಶ್ರೀ ಕೃಷ್ಣನ ಭೇಟಿ ದ್ರೌಪದಿ ಸ್ವಯಂವರದಲ್ಲಿ ಆಗುತ್ತದೆ. ಪಾಂಡವರು ಬ್ರಾಹ್ಮಣರ ವೇಷಧರಿಸಿದ್ದರೂ ಕೃಷ್ಣನಿಗೆ ಅವರನ್ನು ನೋಡಿದ ತಕ್ಷಣದಲ್ಲೇ ತನ್ನ ಸೋದರತ್ತೆ ಕುಂತಿಯ ಮಕ್ಕಳಾದ ಪಾಂಡವರು ಎಂಬುದಾಗಿ ತಿಳಿದುಹೋಗುತ್ತದೆ. ಪಾಂಡವರೈವರೂ ದ್ರೌಪದಿಯನ್ನು ವರಿಸಿದ ವಿಷಯ ತಿಳಿದು, ಆತಂಕದಿಂದಿದ್ದ ದ್ರೌಪದಿಯ ತಂದೆಯನ್ನು ಆಕೆಯ ಪೂರ್ವಜನ್ಮದ ಕಥೆಯನ್ನು ಹೇಳಿ ಸಮಾಧಾನ ಮಾಡುತ್ತಾನೆ. ಹೀಗೆ ಪಾಂಡವರು ಮತ್ತು ಕೃಷ್ಣನ ಸ್ನೇಹ ಬೆಳೆಯುತ್ತದೆ. ಮತ್ತು ಉಪಾಯದಿಂದ ತನ್ನ ತಂಗಿಯಾದ ಸುಬಧ್ರೆಯನ್ನು ಅರ್ಜುನನಿಗೆ ಮದುವೆ ಮಾಡಿಸುತ್ತಾನೆ. ಪಾರ್ಥನಿಗೆ ಆಪ್ತಮಿತ್ರನಾಗುತ್ತಾನೆ. ಮತ್ತು ನ್ಯಾಯಯುತವಾಗಿ ಪಾಂಡವರಿಗೆ ಇಂದ್ರಪ್ರಸ್ಥವೆಂಬ ಪುರವನ್ನು ಆಳಲು ಅನುವು ಮಾಡಿಕೊಡುತ್ತಾನೆ. ಹೀಗೆ ಪಾಂಡವರ ಮತ್ತು ಶ್ರಿ ಕೃಷ್ಣನ ಸಂಬಂಧ ನಿಕಟವಾಗುತ್ತದೆ.

ಕುಮಾರವ್ಯಾಸನು ಕಥೆಯ ಉದ್ದಕ್ಕೂ ನಾರಾಯಣನ ಮಹಿಮೆಯನ್ನು ಅಲ್ಲಲ್ಲಿ ಹೇಳುತ್ತಾನೆ. ಉದಾಹರಣೆಗೆ ಸಭಾಪರ್ವದಲ್ಲಿ ಪಾಂಡವರು ರಾಜಸೂಯಯಾಗವನ್ನು ಮಾಡಲು ನಿರ್ಧರಿಸಿರಲಾಗಿ ಯಾರಿಗೆ ಅಗ್ರಪೂಜೆಯನ್ನು ಸಲ್ಲಿಸಬೇಕೆಂದು ಯೋಚಿಸಲು ಭೀಷ್ಮರು ಶ್ರೀ ಕೃಷ್ಣನ ಹೆಸರನ್ನು ಸೂಚಿಸುತ್ತಾರೆ. ಅದಕ್ಕೆ ಕುಮಾರವ್ಯಾಸನು ಹೇಳುವುದೇನೆಂದರೆ,

"ನಿರವಯವ ತತ್ವಕ್ಕೆ ಪದವಿದೆ,
ನರಮನೋಹರ ರೂಪಿಸಲಿ ವ್ಯವ-
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿಧಾನದಲಿ
ಭರತ ಬಹಳ ಬ್ರಹ್ಮವಿಲ್ಲಿಯೆ,
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ"

ಭಗವಂತನು ನಿರಾಕಾರ (ನಿರವಯವ). ಆದರೆ ದೇವನಾದ ಕೃಷ್ಣನಿಗೆ ಆಕಾರವಿದೆ. ಅಂದರೆ ಕೃಷ್ಣನ ಮನೋಹರ ರೂಪವು ಆ ನಿರಾಕಾರತತ್ವಕ್ಕೆ ಆಕಾರ. ಅದೇ ರೀತಿ ಇಡೀ ಬ್ರಹ್ಮವೇ ಅವನಲ್ಲಿ ಅಡಗಿದ್ದರೂ ಭುವಿಯ ಮೇಲೆ ಸಂಚರಿಸುವ ಮುರಹರನ ಲೀಲೆಯ ರಹಸ್ಯವನ್ನು ಅರಿಯುವರಾರು ಎನ್ನುತ್ತಾನೆ. ’ವ್ಯವಹರಣ ಸಂಜ್ಞಾರಹಿತವಿದೆ ಕೃಷ್ಣಾಭಿದಾನದಲಿ’ ಎಂಬ ಮಾತಿನ ಅರ್ಥ ವಿಶಿಷ್ಟ ಪೂರ್ಣ. ಕೃಷ್ಣ ಎಂಬುದು ಒಂದು ಅಂಕಿತನಾಮ. ಅದು ಒಂದು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಆದರೆ ಕುಮಾರವ್ಯಾಸನು ಹಾಗೆ ಹೇಳುವುದಿಲ್ಲ. ಕೃಷ್ಣ ಎಂಬ ಹೆಸರು ಸಾಮಾನ್ಯ ಅಂಕಿತ ನಾಮದಂತಲ್ಲ. ಅದು ಸಂಜ್ಞೆ ರಹಿತವಾದದ್ದು. ಅಂದರೆ ಜಗತ್ತನ್ನು ವ್ಯಾವಹಾರಿಕತೆಯಿಂದ ಬೇರ್ಪಡಿಸುವುದು ’ಕೃಷ್ಣ’ ಎಂಬ ಹೆಸರು. ಮತ್ತು ಅದನ್ನು ಜೋಡಿಸುವುದೂ ಕೂಡ ಅದೇ ಹೆಸರೇ ಅನ್ನುತ್ತಾನೆ.

ಕೃಷ್ಣನ ನಯನ ಮನೋಹರ ರೂಪದ ಬಗ್ಗೆ ಕುಮಾರವ್ಯಾಸನು ಅನೇಕ ಕಡೆ ಸುಂದರವಾಗಿ ವರ್ಣಿಸುತ್ತಾನೆ. ಉದ್ಯೋಗ ಪರ್ವದಲ್ಲಿ ಕೌರವ ಪಾಂಡವರ ನಡುವೆ ಸಂಧಾನಕ್ಕೆ ಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ರಾಜಾತಿಥ್ಯವನ್ನೂ ಮನ್ನಿಸದೇ, ತಾನು ಬಡವನಾದ ಕಾರಣದಿಂದ ತನ್ನ ಮನೆಗೆ ಆವ್ಹಾನಿಸಲೂ ಸಂಕೋಚದಿಂದಿದ್ದ ಭಕ್ತನಾದ ವಿದುರನ ಮನೆಗೆ ಹೋಗುತ್ತಾನೆ. ತನ್ನ ಗುಡಿಸಲಿಗೆ ನಡೆದು ಬರುತ್ತಿರುವ ಶ್ರೀ ಕೃಷ್ಣನ ದರ್ಶನದಿಂದ ವಿದುರನು ’ತನುವ ಮರೆದನು ಪುಳಕಜಲದಲಿ ನನೆದು ನಾರಾಯಣನ ಪದದರುಶನದ ಹರುಶಾರಣ್ಯದಲಿ ಮನ ಹೊಲಬುದಪ್ಪಿದನು’ ಎನ್ನುವ ಕುಮಾರವ್ಯಾಸನ ಶಬ್ದಗಳಲ್ಲಿ ತಾನೇ ನಾರಾಯಣನ ದರ್ಶನವನ್ನು ಪಡೆದಂತೆ ಬಣ್ಣಿಸುತ್ತಾನೆ. ಹಾಗೆ ವಿದುರನ ಮನೆಗೆ ಬಂದ ಕೃಷ್ಣನ ’ಸಿರಿ ಮೊಗದ ಕಿರುಬೆವರು’, ’ಕೆಂಪಡರ್ದ ರೇಣುಗಳ ಕೊನೆಮೀಸೆ, ತಂಬುಲ ಸೂಸುವಂತೆ ನಗುವ ಅವನ ಠೀವಿ ಆಪ್ತರೊಡನೆ ತೊಡೆಸೋಕಿನೊಳು ನಡೆಸುವ ಸರಸ’, ಇಂತಹ ಚೇಷ್ಟೆಗಳ ವರ್ಣನೆ ಇದೆ.

ಶ್ರೀ ಕೃಷ್ಣನೇ ಹೇಳಿದಂತೆ ಅವನು ’ಭಂಟರಾಂ ಭಕ್ತರ್ಗೆ’. ಅಂದರೆ ದೇವನು ಭಕ್ತರಾದವರ ಬಂಟನು. ಅಂತೆಯೇ ಭಕ್ತನಾದ ವಿದುರನ ಮನೆಗೆ ಕೃಷ್ಣನೇ ಕರೆಯದಿದ್ದರೂ ಅತಿಥಿಯಾಗಿ ಹೋಗುತ್ತಾನೆ. ’ವೇದದ ಅರಿಕೆಗಳಿಗೆ ಅಳವಡದ, ಉಪನಿಷದಾದಿ ದಿವ್ಯಸ್ತುತಿಯ ಗಡಣೆಗೆ ಅಳವಡದ ಮಹಿಮಾವಲಂಬನು, ಮುನಿಗಳ ಮನಕೆ ಮೈಗುಡದ, ಕಾದಿ ಕಡಗುವ ತಾರ್ಕಿಕರು ಬೆಂಡಾದರಲ್ಲದೇ ನಿಜವ ತಿಳಿಯಲಿಲ್ಲ’ ಎನ್ನುತ್ತಾನೆ ಕುಮಾರವ್ಯಾಸ. ದೇವನನ್ನು ಒಲಿಸುವ ಒಂದೇ ಮಾರ್ಗ ಭಕ್ತನಾಗುವುದು. ವೇದ ಉಪನಿಷಾದಿಗಳ ಜ್ಞಾನ ಯಾವವೂ ಅವನನ್ನು ಬಳಿಗೆ ತರುವುದಿಲ್ಲ. ಭಕ್ತನಾದೊಡೆ ದೇವನೇ ಮನೆಯ ಬಾಗಿಲಿಗೆ ಬರುವನು ಎನ್ನುವಲ್ಲಿ ಕುಮಾರವ್ಯಾಸನು ಭಕ್ತಿಯ ಚಮತ್ಕಾರವನ್ನು ಹೇಳುತ್ತಾನೆ. ಅಲ್ಲದೇ ಮನೆಯ ಬಾಗಿಲಿಗೆ ಬಂದ ಕೃಷ್ಣನನ್ನು ನೋಡಿದ ವಿದುರನು ಭ್ರಮೆಯಾದಂತೆ ಕುಣಿದಾಡಿದನು. ಇದನ್ನು ಕಂಡ ಕೃಷ್ಣನು "ನಾವು ಹಸಿದುಬಂದಾಗ ನೀನು ಈ ಪರಿ ಕುಣಿದಾಡುವುದೆ?" ಎಂದು ತಾನೇ ವಿದುರನನ್ನು ಒಳಗೆ ಕರೆದೊಯ್ಯುತ್ತಾನೆ. ಅಲ್ಲದೇ ಪಾಲ್ಗಡಲೊಳಗೆ ಮಲಗುವ ಕೃಷ್ಣ, ವಿದುರನ ಮನೆಯಲ್ಲಿ ಹಾಲಿನ ಶರಧಿಯನ್ನೇ ಹರಿಸಿದ. ಹೀಗೆ ಇಂತಹ ಸನ್ನಿವೇಶಗಳ ವರ್ಣನೆಗಳಲ್ಲಿ ಕುಮಾರವ್ಯಾಸನ ಭಕ್ತಿಯ ಪರವಶತೆಯನ್ನು ಹೇರಳವಾಗಿ ಕಾಣಬಹುದು.

ಸಭಾಪರ್ವದಲ್ಲಿ ಧರ್ಮರಾಯನು ದ್ರೌಪದಿಯನ್ನು ಸೋತ ನಂತರ ದುಷ್ಯಾಸನನು ಆಕೆಯನ್ನು ನಿಷ್ಕಾರುಣ್ಯವಾಗಿ ಸಭೆಗೆ ಎಳೆತಂದು ಆಕೆಯ ವಸ್ತ್ರಾಪಹರಣಕ್ಕೆ ಯತ್ನಿಸಿತ್ತಿರುವಾಗ, ಆ ಸಂಕಷ್ಟದಲ್ಲಿ ದ್ರೌಪದಿಯು ತನ್ನ ಪತಿಗಳ, ಸಭೆಯ ಹಿರಿಯರ ಮೊರೆಹೋಗುತ್ತಾಳೆ. ಆದರೆ ಎಲ್ಲರೂ ಅಸಾಹಾಯಕರಾದಾಗ, ಆಕೆ ಕೃಷ್ಣನೊಬ್ಬನೆ ತನಗೆ ಅನನ್ಯ ಶರಣೆಂದು ಬಗೆದು ’ ಕೃಷ್ಣಾ, ನಿನ್ನ ಮೈದುನರ ಮರುಳಾಟಕೆ ಬೈದು ಫಲವೇನು?, ನನ್ನನ್ನು ಕಾಯ್ದುಕೊಳ್ಳು’ ಎಂದು ಮೊರೆಹೋಗುತ್ತಾಳೆ. ’ಮರೆವೆನಭ್ಯುದಯದಲಿ, ನೆನೆವೆನಾಪತ್ತಿನಲಿ’ ಎಂದು ಮಾನವ ಸಹಜ ದೌರ್ಬಲ್ಯವನ್ನು ನುಡಿಯುತ್ತಾಳೆ. ’ಗತಿ ಹೀನರೆಗೆ ನೀನೇ ಗತಿ’ ಎಂದು ಮೊರೆಯಿಡುತ್ತಾಳೆ. ಆಕೆ ಕರೆದ ತಕ್ಷಣ ಕೃಷ್ಣನು ತನ್ನ ಯೋಗಶಕ್ತಿಯಿಂದ ’ಆಕೆಯುಟ್ಟ ಸೀರೆಯು ಸೆಳೆಯಲು ಅಕ್ಷಯದ ಸೀರೆಯಾಗಲಿ’ ಎಂದು ಹರಸುತ್ತಾನೆ. ತಕ್ಷಣವೇ ಆಕೆಯುಟ್ಟ ಸೀರೆ ಅಕ್ಷಯವಾಗುತ್ತದೆ. ಹೀಗೆ ದೇವಕೀಸುತನ ಕಾರುಣ್ಯವು ಅಸಾಮಾನ್ಯವಾದದು ಎಂದು ಕುಮಾರವ್ಯಾಸ ಹೇಳುತ್ತಾನೆ.

ವೀರರಸದಿಂದ ಕೂಡಿದ ಭಕ್ತಿಯ ಇನ್ನೊಂದು ಪರಿ ಭೀಷ್ಮರದ್ದು. ಕಾಳಗದಲ್ಲಿ ಆಯುಧವನ್ನು ಹಿಡಿಯುವುದಿಲ್ಲವೆಂಬುದಾಗಿ ಶಪಥ ಮಾಡಿದ ಶ್ರೀ ಕೃಷ್ಣನನ್ನು ಆಯುಧ ಪಿಡಿಯುವಂತೆ ಮಾಡುತ್ತೇನೆಂದು ಭೀಷ್ಮರು ಪ್ರತಿಜ್ಞೆ ಮಾಡಿರುತ್ತಾರೆ. ಯುದ್ದದಲ್ಲಿ ಭೀಷ್ಮರು ತನ್ನ ಶೌರ್ಯದಿಂದ ಪಾಂಡವ ಸೇನೆಯನ್ನು ಸೆದೆಬಡೆಯುತ್ತಾ ಮುಂದುವರಿಯಲು, ಅರ್ಜುನನೂ ಕೂಡ ಅಸಹಾಯಕನಾಗುತ್ತಾನೆ. ಆಗ ಯುದ್ದದ ಆವೇಶದಲ್ಲಿ ಭೀಷ್ಮನನ್ನು ತಾನೇ ಎದುರಿಸುತ್ತೇನೆ ಎಂದು ಕೃಷ್ಣನು ತನ್ನ ಚಕ್ರವನ್ನು ಹಿಡಿದಾಗ, ಭೀಷ್ಮನು ’ಕೊಲುವ ಮನವೇ ಬಿಸುಡು, ಚಕ್ರವನ್ನೆನ್ನ ಕಾಯದಲಿ’ ಎಂದು ತನ್ನ ಆಯುಧಗಳನ್ನು ತ್ಯಜಿಸುತ್ತಾನೆ. ಹೀಗೆ ಕೃಷ್ಣನು ತನ್ನ ಶಪಥವನ್ನೇ ಮರೆತು ಭಕ್ತನಾದ ಭೀಷ್ಮರ ವಚನವನ್ನು ಕಾಯುತ್ತಾನೆ ಎಂದು ಕುಮಾರವ್ಯಾಸ ಕೃಷ್ಣನನ್ನು ಕೊಂಡಾಡುತ್ತಾನೆ.

ಕುಮಾರವ್ಯಾಸನು ಚಿತ್ರಿಸಿರುವಂತೆ ಕೃಷ್ಣನು ತನ್ನ ಮಾಯೆಯಿಂದ ಜಗತ್ತನ್ನು ಸೃಷ್ಟಿಸಿ ರಕ್ಷಿಸುವಂತೆ ಅವನಿಗೆ ಈ ಜಗತ್ತಿನ ಬಗ್ಗೆ ಗೌರವವೂ ಇದೆ. ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿ ಯುದ್ದವನ್ನು ಮಾಡುವಂತೆ ಪ್ರೇರೇಪಿಸಿಸುತ್ತಾನೆ. ಆದರೆ ಕೆಲವೊಮ್ಮೆ ಮನುಷ್ಯತ್ವದ ಸಮಸ್ಯೆಗಳನ್ನು ಬಿಡಿಸುವಾಗ ದೇವನಾಗಿ ತಾನೇ ಸೋಲುತ್ತಾನೆ. ಉದಾಹರಣೆಗೆ ಕರ್ಣನನ್ನು ಅರ್ಜುನನು ಕೊಲ್ಲುವ ಸನ್ನಿವೇಶ. ಅರ್ಜುನನು ಅಸಾಹಾಯಕನಾದ ಕರ್ಣನನ್ನು ಕೊಲ್ಲುವುದಿಲ್ಲವೆಂದು ಹಟ ಹಿಡಿಯುತ್ತಾನೆ. ಆದರೆ ಕರ್ಣನ ಸಾವು ನಿಶ್ತಿತವೆಂದು ತಿಳಿದ ಕೃಷ್ಣನು ಅರ್ಜುನನನ್ನು ಒತ್ತಾಯಿಸುತ್ತಾನೆ. ಕೃಷ್ಣನು ’ಬಹುರಾಜಕಾರ್ಯವನೀಗಲೇ ತಿದ್ದುವೆನು ತೊಲಗಿಸು ಸೂತಜನ ಶಿರವ’, ಎನ್ನುತ್ತಾನೆ. ಅಸಹಾಯಕನಾದವನನ್ನು ಕೊಲ್ಲುವುದು ಮನುಷ್ಯಧರ್ಮವಲ್ಲ. ಆದರೆ ಕರ್ಣನ ಸಾವು ಅನಿವಾರ್ಯವೆಂಬುದು ಕೃಷ್ಣನಿಗೆ ತಿಳಿದುದು. ಅದರ ಕಾರಣಾರ್ಥಗಳನ್ನು ಅರ್ಜುನನಿಗೆ ಅರ್ಥೈಸಲು ಕೃಷ್ಣನು ಸೋಲುತ್ತಾನೆ. ಬದಲಿಗೆ ರಾಜನೀತಿಯನ್ನೇ ಬದಲಿಸುತ್ತೇನೆ ಎನ್ನುತ್ತಾನೆ. ಆದರೆ ಕೃಷ್ಣನೂ ಮರುಗುತ್ತಿದ್ದಾನೆ ಮನದಲ್ಲಿ. ಅರ್ಜುನನ ಮಾತುಗಳನ್ನು ಕೇಳಿ ’ವಾಗ್ವಿಸ್ತರಕೆ ಮನದೊಳು ಮರುಗಿದನು ಮುರವೈರಿ ಕೆರಳಿದನು ಬಾಹಿರದಲಿ’, ಎನ್ನುತ್ತಾನೆ ಕುಮಾರವ್ಯಾಸ.

ಕೃಷ್ಣನು ಮಾನವರ ಸುಖದುಃಖಗಳಲ್ಲಿ ಪಾಲ್ಗೊಂಡರೂ ಅವನು ದೈವನೇ. ಯುದ್ಧ ಮುಗಿದ ಮೇಲೆ ತನ್ನೆಲ್ಲ ಪುತ್ರರನ್ನೂ ಕಳೆದುಕೊಂಡ ಗಾಂಧಾರಿಯ ದುಃಖಕ್ಕೆ ಸಮಾಧಾನದ ಮಾತಾಗಿ ’ಬ್ರಹ್ಮಾದಿಗಳಿಗಿದು ದಾಯವೇ ಸಂಸಾರವೆಂದನು ನಗುತ ಮುರವೈರಿ.’ ಎಂದರೆ ಸಂಸಾರದ ಸುಖದುಃಖಗಳನ್ನು ಮನುಷ್ಯನು ಮಾತ್ರ ಪೂರ್ಣವಾಗಿ ಅನುಭವಿಸಬಲ್ಲ. ಆ ಶಕ್ತಿ ದೇವತೆಗಳಿಗಿಲ್ಲ. ಕೃಷ್ಣ ವ್ಯಕ್ತಿಯಾಗಿ ಅವರ ಸುಖ ದುಃಖಗಳಲ್ಲಿ ಪಾಲ್ಗೊಂಡರೂ ಅವರಂತೆ ಅವರ ಇಹ ಬದುಕನ್ನು ಸಂಪುರ್ಣವಾಗಿ ಅನುಭವಿಸಲು ಸೋಲುತ್ತಾನೆ.

ಹೀಗೆ ಗದುಗಿನ ಭಾರತವು ಶ್ರೀ ಕೃಷ್ಣನ ಕಥೆಯಾಗಿದೆ. ಕುಮಾರವ್ಯಾಸನ ಭಕ್ತಿರಸದಿಂದ ತುಂಬಿದ ಭಾರತವು ಅತ್ಯದ್ಭುತ ಭಕ್ತಿ ಕಾವ್ಯವಾಗಿದೆ. ಪ್ರತ್ಯಕ್ಷವಾಗಿ ಮಹಾಭಾರತವು ಕೃಷ್ಣನ ಕಥೆಯಲ್ಲದಿದ್ದರೂ ಅವನು ಕಥೆಯಲ್ಲಿನ ಒಂದು ಪಾತ್ರ. ಆದರೂ ಅವನು ಕಥೆಯಿಂದ ಬೇರೆ. ಅವನು ಕಥೆಯೊಳಗೆ ಪ್ರವೇಶಿಸುವುದರಿಂದಾಗಿ, ಕಥೆಯನ್ನು ನಡೆಸುವುದರಿಂದಾಗಿ ಕಥೆ ಅವನದಾಗುತ್ತದೆ. ’ಇದು ಮುರಾರಿಯ ಲೀಲೆಗೋಸುಗ ಉದಯಿಸಿದ ಜಗ’. ಎಂದು ಕುಮಾರವ್ಯಾಸ ಎನ್ನುತ್ತಾನೆ. ಜಗತ್ತೇ ಆ ದೇವನ ಲೀಲೆ. ಆರಂಭದಲ್ಲಿಯೇ ಹೇಳಿದಂತೆ ತುಳಸಿಯ ಉದಕ ಕೇವಲ ನೀರೆನಂತೆ ಕಂಡರೂ ಅದು ತುಳಸಿಯ ಸ್ಪರ್ಷದಿಂದ ಪಾವನ. ಅಂತೆಯೇ ಪದುಮನಾಭನ ಸ್ಪರ್ಷ ಪಡೆದ ಕುಮಾರವ್ಯಾಸನ ಈ ಭಾರತದ ಕಥೆಯೂ ಪಾವನ. ಹಾಗೆಯೇ ಈ ದೃಷ್ಟಿಯಿಂದ ಭಾವಿಸಿದರೆ ಸಕಲವೂ ಆ ದೇವನದೇ ಆದಾಗ, ಯಾವ ಕಥೆಯೂ, ಯಾವ ಕಾವ್ಯವೂ ಕೃಷ್ಣ ಕಥೆಯಾಗುವುದೂ ಅಷ್ಟೇ ಸತ್ಯ.

Sunday, October 4, 2009

ಕನ್ನಡ ಸಾಹಿತ್ಯದಲ್ಲಿ ಅನುಭಾವ-೨

ದಾಸ ಸಾಹಿತ್ಯ

"ನಾಯಮಾತ್ಮಾ ಪ್ರವಚನೇನ ಅಭ್ಯೋ ನ ಮೇಧಯಾ ನ ಬಹುಧಾ ಶ್ರುತೇನ" ಅಂದರೆ, ಆತ್ಮಜ್ಞಾನವು ಪ್ರವಚನದಿಂದಾಗಲಿ, ಮೇಧಾಶಕ್ತಿಯಿಂದಾಗಲಿ ಅಥವಾ ಶ್ರವಣದಿಂದಾಗಲಿ ಲಭ್ಯವಾಗುವುಂಥದ್ದಲ್ಲ. ಆತ್ಮವು, ಕೇವಲ ಭೌತಿಕವಾದ ಇವೆಲ್ಲಕ್ಕೂ ಅತೀತವಾದದ್ದು. ಒಳಗಣ್ಣು ತೆರೆದಾಗ ಮಾತ್ರ ಆ ದಿವ್ಯ ಬೆಳಕು ಒಳಕ್ಕೆ ಹರಿಯುತ್ತದೆ, ಆ ಬಂಗಾರದ ಮುಚ್ಚಳ ತೆರೆದು ಸತ್ಯದ ದರ್ಶನವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಹಲವರು ಸತ್ಯಶೋಧನೆಯ ಈ ಮಾರ್ಗದಲ್ಲಿ ಸಾಗಿದ್ದಾರೆ. ಅವರಲ್ಲಿ ಅನೇಕರಿಗೆ ಸತ್ಯದರ್ಶನ ಸಾಧ್ಯವಾಗಿದೆ. ಆದರೆ ಅಂತಹ ಅನುಭಾವಿಗಳಲ್ಲಿ ಕೆಲವರು ಮಾತ್ರ ತಮಗಾದ ಆ ಅನುಭವವನ್ನು ಶಬ್ದಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಒಂದು ಮಹದ್ಪ್ರಯತ್ನವನ್ನು ಹದಿನೈದನೇ ಶತಮಾನದಲ್ಲಿ ದಾಸರು ಕನ್ನಡ ನೆಲದಲ್ಲಿ ವ್ಯಾಪಕವಾಗಿ ಮಾಡಿದರು. ಈ ದಾಸಸಾಹಿತ್ಯದಿಂದ ನಮ್ಮ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಯಿತು.

ಪುರಂದರ ದಾಸರು, ಕನಕದಾಸರು, ಮತ್ತು ವಾದಿರಾಜರದು ದಾಸಸಾಹಿತ್ಯದಲ್ಲಿ ಜನಪ್ರಿಯ ಹೆಸರುಗಳು. ಇವರೆಲ್ಲರೂ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ದಾಂತವನ್ನು ಅನುಸರಿಸಿದವರಾದ್ದರಿಂದ ಆ ಮಾದರಿಯಲ್ಲೇ ಇವರ ಅನುಭಾವ ಮಾರ್ಗವೂ ಬೆಳೆದು ಬಂದಿತು. ಇವರೆಲ್ಲರೂ ಹರಿಯನ್ನೇ ಸರ್ವೋತ್ತಮನೆಂದು ಭಾವಿಸಿ ತಮ್ಮ ಜೀವನದ ಆ ಶ್ರ‍ೇಷ್ಠ ಸತ್ಯವನ್ನು ಕಂಡುಕೊಂಡವರು. ದಾಸರು ಹರಿಯನ್ನು ಸಾಕಾರ ಸಗುಣ ರೂಪದಲ್ಲಿ ಆರಾಧಿಸಿದವರು. ಆದುದರಿಂದಲೇ ದಾಸರದು ಭಕ್ತಿಪಂಥವಾಯಿತು. ಆ ದೈವೀ ಶಕ್ತಿಯೊಡನೆ ವಿವಿಧ ಮಾನವೀಯ ಸಂಬಧವನ್ನು ಭಾವಿಸಿ, ಪ್ರೇಮಿಸಿ, ಆ ಭಕ್ತಿಯ ಆನಂದವನ್ನು ಭಕ್ತರಾಗಿ ದೇವನಿಂದ ಬೇರೆಯಾಗಿಯೇ ನಿಂತು ಸವಿದರು. ಒಮ್ಮೆ ಮಗನಂತೆ, ಒಡೆಯನಂತೆ, ಸ್ನೇಹಿತನಂತೆ, ಪತಿಯಂತೆ ದೇವನನ್ನು ದಾಸರು ಕಂಡಿದ್ದಾರೆ. ಕೆಲವೊಮ್ಮೆ ಸೇವಕನಾಗಿ, ತಾಯಿಯಾಗಿ ವಾತ್ಸಲ್ಯ ಭಾವದಿಂದ ದೇವನನ್ನು ಉಪಾಸಿಸಿದ್ದಾರೆ.

"ದಾಸನ ಮಾಡಿಕೊ ಎನ್ನ ಸ್ವಾಮಿ,
ಸಾಸಿರ ನಾಮದ ವೇಂಕಟರಮಣ."

ಎನ್ನುವಲ್ಲಿ ಹನುಮಂತನ ದಾಸ್ಯಭಕ್ತಿ..

"ಪೋಗುವುದಿಚಿತವೇ ಮಾಧವ ಮಧುರೆಗೆ
ಬಾಗುವೆ ಎಲೋ ನಿನಗೆ"

ಎನ್ನುವಲ್ಲಿ ಪ್ರಿಯ ಸಖನಿಗಾಗಿ ಹಂಬಲಿಸುವ ರಾಧೆಯ ವಿರಹ...

"ಕರುಣಾಕರ ನೀನೆಂಬುವುದ್ಯಾತಕೋ
ಭರವಸೆಯಿಲ್ಲೆನೆಗೆ..."
ಇದು ನಿನಗೆ ಧರ್ಮವೇ ಇಂದಿರೇಶಾ,
ಬದಿಗ ನೀನಾಗಿದ್ದು ಭೀತಿಪಡಿಸುವುದು"

ಎನ್ನುವಾಗ ತೋರುವ ಅರ್ಜುನನ ಸಖ್ಯ ಭಕ್ತಿ....

"ಪೋಗದಿರೆಲೋ ರಂಗ, ಬಾಗಿಲಿಂದಾಚೆ
ಭಾಗವತರು ಬಂದು ಕರೆದೆತ್ತಿಕೊಂಡೊಯ್ಯುವರೋ"

ಎನ್ನುವಲ್ಲಿ ಯಶೋಧೆಯ ವಾತ್ಸಲ್ಯ ಭಾವ..

ಎಲ್ಲವೂ ದಾಸರ ಕಾವ್ಯದಲ್ಲಿ ವ್ಯಕ್ತವಾಗುತ್ತವೆ. ದಾಸರ ಪೂರ್ಣ ಸಮರ್ಪಣೆಯ ಭಾವದಿಂದಲೇ ಅವರ ಭಕ್ತಿ ಮಾರ್ಗದಲ್ಲಿನ ಸಾಧನೆ ಬೆಳೆದು ಪೂರ್ಣಗೊಳ್ಳುತ್ತದೆ. ಯಾರು ಹೇಗೆ ತಮ್ಮ ದೇವನನ್ನು ಆರಾಧಿಸುವರೋ ಅದೇ ರೂಪದಲ್ಲಿ ಅವನ ದರ್ಶನ ಲಭಿಸುತ್ತದೆ ಎನ್ನುತ್ತಾರೆ ದಾಸರು.

ತಾವು ಕಂಡ ಆ ಸಾಕಾರ ಮೂರ್ತಿಯ ವರ್ಣನೆಯೂ ಅತ್ಯಂತ ಸೊಗಸಾಗಿ ದಾಸರು ಮಾಡುತ್ತಾರೆ.
"ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದೆ,
ಮಸ್ತಕದಲ್ಲಿ ಮಾಣಿಕದ ಕಿರೀಟ,
ಕಸ್ತೂರಿ ತಿಲಕದಿಂದೆಸೆವ ಲಲಾಟ,
ಹಸ್ತದಿಂದ ಕೊಳಲನೂದುವ ಓರೆನೋಟ,
ಕೌಸ್ತುಭ ಎಡಬಲದಲ್ಲಿ ಓಡ್ಯಾಣ..."

ದಾಸರು ತೋರಿಸುವ ದೇವ, ಪೀತಾಂಬರ ಉಟ್ಟ, ಮಾಣಿಕ್ಯ ಕಿರೀಟ ಧರಿಸಿದ, ಕೊರಳಲ್ಲಿ ತುಳಸೀಮಾಲೆಯಿಂದ ಶೋಭಿಸುವ, ಕಸ್ತೂರಿ ತಿಲಕವಿರುವ ಸಾಕಾರ ರೂಪ. ಆದರೆ ಆ ರೂಪವೂ ಹಾಗೂ ಆ ರೂಪದ ಜೊತೆಗಿನ ಅನುಬಂಧ ಕೂಡ ಪ್ರಾಪಂಚಿಕ ಎಲ್ಲ ಬಂಧನಗಳನ್ನೂ ಮೀರಿದ್ದು. ಮತ್ತು ಅವರ ಬಂಧ ಆ ಒಂದು ರೂಪದೊಂದಿಗೆ ಮಾತ್ರ. ದಾಸರ ಈ ಭಾವವನ್ನು ಸ್ಪಷ್ಟವಾಗಿ ಕಾಣಬಹುದು ಇಂತಹ ಕೀರ್ತನೆಗಳಲ್ಲಿ.

"ಯಾರು ಒಲಿದರೇನು ನಮಗಿನ್ನಾರು ಮುನಿದರೇನು,
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ,
ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು?
ವಾರಿಜನಾಭನ ವಸುದೇವನ ಸುತನ ಸಾರಿದಂಥ ಹರಿದಾಸರಿಗೆ."

ದಾಸರ ಕಾವ್ಯಗಳಲ್ಲಿ ಸಾಕ್ಷಾತ್ಕಾರ ಅನುಭವದ ಕೊನೆಯ ಹಂತದಲ್ಲೂ ಸಾಕಾರ ಮೂರ್ತಿಯ ವರ್ಣನೆಯನ್ನೇ ಕಾಣುತ್ತೇವೆ. ಶರಣರಂತೆ "ಲೀಲೆಯಾದೊಡೆ ಉಮಾಪತಿ, ಲೀಲೆ ತಪ್ಪಿದೊಡೆ ಸ್ವಯಂಭು" ಎಂಬಂತಹ ನಿರಾಕಾರ ದೈವತ್ವದ ಕಲ್ಪನೆ ಕಾಣಬರುವುದಿಲ್ಲ. ದಾಸರು ಪಕ್ಷಿವಾಹನ, ಲಕ್ಷ್ಮೀರಮಣನಾದ, ಪನ್ನಗಶಯನನಾದ ಸರ್ವಾಲಂಕಾರ ಭೂಷಿತ ಹರಿಯನ್ನು ಮಾತ್ರ ಕಾಣಬಲ್ಲರು. ಹರಿಯು, ತುಳಸಿ ಕೌಸ್ತುಭ ಪೀತಾಂಬರ ಸಹಿತನಾಗಿಯೇ ತನ್ನ ಸಾತ್ವಿಕ ರೂಪದಿಂದ ದಾಸರ ಅಂತರಂಗವನ್ನು ಹೊಕ್ಕಿರುವಂತೆ ತೋರುತ್ತದೆ.

ದಾಸರಿಗೆ ಇಹ ಲೋಕದ ಜೀವನ ನೀರ ಮೇಲಣ ಗುಳ್ಳೆಯಂತೆ ಕಾಣುತ್ತದೆ. ದೇವರ ಕೃಪೆಯನ್ನು ನಂಬಿ ಆತನಿಗೇ ಎಲ್ಲವನ್ನೂ ಒಪ್ಪಿಸಿ ಬದುಕಬೇಕೆನ್ನುತ್ತಾರೆ.
"ಕೆರೆಯ ನೀರನು ಕೆರೆಗೆ ಚಲ್ಲಿ,
ವರವ ಪಡೆದವರಂತೆ ಕಾಣಿರೋ..
ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೋ"
ಎನ್ನುವಂತೆ ಜೀವನ ಇರಬೇಕು. ಇಂತಹ ಉನ್ನತ ಜೀವನದ ಆದರ್ಶ, ಉದಾತ್ತ ಕಲ್ಪನೆ, ರೀತಿ ನೀತಿಗಳ ಉಪದೇಶಗಳನ್ನು ದಾಸರ ಕೀರ್ತನೆಗಳಲ್ಲಿ ಕಾಣಬಹುದು.

ಶರಣ ಸಾಹಿತ್ಯದಂತೆ ದಾಸ ಸಾಹಿತ್ಯವೂ ಕೂಡ ಸಮಾಜದ ಮೇಲೆ ಅಗಾಧವಾದ ಪ್ರಭಾವ ಬೀರಿತು. ಸರಳವಾದ ಸುಂದರವಾದ ಕೀರ್ತನೆಗಳು ಎಲ್ಲರ ಮನೆ ಮನೆಗಳಲ್ಲಿ ಇಂದಿಗೂ ಕೇಳಬರುತ್ತವೆ. ಸಾಹಿತ್ಯದ ಜೊತೆಗೆ ಸಂಗೀತದ ಪ್ರಭಾವವನ್ನೂ ಆಧ್ಯಾತ್ಮಿಕ ಸಾಧನೆಗೆ ಬಳಸಿಕೊಂಡರು ದಾಸರು. ದಾಸಸಾಹಿತ್ಯಕ್ಕೆ ಅದರಲ್ಲಿಯೂ ಮುಖ್ಯವಾಗಿ ಪುರಂದರದಾಸರು ಮತ್ತು ಕನಕ ದಾಸರಿಗೆ ಸಂಗೀತ ಕ್ಷೇತ್ರದಲ್ಲೂ ಬಹಳ ಪ್ರಾಮುಖ್ಯವಾದ ಸ್ಥಾನವಿದೆ. ಆದರೆ ಸಂಗೀತವಾಗಲೀ ಸಾಹಿತ್ಯವಾಗಲಿ ಶರಣರಂತೆಯೇ ದಾಸರಿಗೂ ತಮ್ಮ ಜೀವನವನ್ನು ಅಭಿವ್ಯಕ್ತಗೊಳಿಸಲು ಮಾತ್ರ ಬೇಕಾಗಿತ್ತು, ಹೊರತೂ ಸಾಹಿತ್ಯ ರಚನೆಯೇ ಅವರ ಉದ್ದೇಶವಾಗಿರಲಿಲ್ಲ. ತಮ್ಮ ಸಾಧನೆಯಲ್ಲಿ ತೋರಿದ ಸಮಸ್ಯೆಗಳು, ಪ್ರಾರಂಭದ ದಿನಗಳಲ್ಲಿ ತಮ್ಮಲ್ಲಿದ್ದ ತಳಮಳಗಳು ಮತ್ತು ಅವುಗಳನ್ನು ಮೆಟ್ಟಿ ನಿಂತು ತಾವು ಬದುಕಿದ ಸಾತ್ವಿಕ ಜೀವನ ಎಲ್ಲವನ್ನೂ ದಾಸರು ಕೀರ್ತನೆಗಳ ಮೂಲಕವೇ ಹೊರಹೊಮ್ಮಿಸಿದರು. "ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ" ಇಂತಹ ಕೀರ್ತನೆಗಳನ್ನು ಅರ್ಥವರಿತು ಹಾಡಿದಾಗ, ಹಾಡುವವರ ಮತ್ತು ಕೇಳುವವರ ಮನಸ್ಸು ಒಂದು ಕ್ಷಣ ಕಾಲವಾದರೂ ಅಂತರ್ಮುಖವಾಗದೆ ಇರಲಾರದು.

ಒಟ್ಟಿನಲ್ಲಿ ದಾಸಸಾಹಿತ್ಯ ವಿಸ್ತಾರದಿಂದಲೂ ಗುಣದಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯಲು ಅರ್ಹವಾಗಿದೆ. ದಾಸಸಾಹಿತ್ಯದಲ್ಲಿ ಬಂದಿರುವ ಅನೇಕ ಮಾತುಗಳು, "ಆಕಳು ಡೊಂಕಾದರೆ ಹಾಲು ಡೊಂಕೇ", "ಕತ್ತೆ ಬಲ್ಲುದೇ ಕಸ್ತೂರಿಯ ಪರಿಮಳವ", "ಕೈಮೀರಿ ಹೋದದ್ದೇ ಕೃಷ್ಣಾರ್ಪಣ", ಸುಭಾಷಿತಗಳಾಗಿ ಜನಜೀವನದಲ್ಲಿ ಸೇರಿಕೊಂಡುಹೋಗಿವೆ. ಹೀಗೆ ಮಾನವನ ಜೀವನದ ಮಹೋದ್ದೇಶವನ್ನು ಸರಳವಾದ ಸುಂದರವಾದ ಮತ್ತು ಸಂಗೀತಮಯವಾದ ಕೀರ್ತನೆಗಳನ್ನು ಹಾಡಿದ ದಾಸರು ಕನ್ನಡದ ಜನರ ಹೃದಯದಲ್ಲಿ ನಿರಂತರವಾಗಿ ನೆಲಸಿದ್ದಾರೆ.

(ಈ ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆ ನೀಡಿದ್ದು ಅಷ್ಟು ಸಮಂಜಸವಾಗಿಲ್ಲವೇನೋ ಅನ್ನಿಸುತ್ತಿದೆ. ಎಕೆಂದರೆ ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ. ಇವಲ್ಲದೇ ಹದಿನೈದನೇ ಶತಮಾನದಲ್ಲಿಯೇ ನಿಜಗುಣ ಶಿವಯೋಗಿಗಳು ಎಂಬ ಮಹಾ ಅನುಭಾವಿಯೊಬ್ಬರು ಆಗಿಹೊಗಿದ್ದಾರೆ. ಅವರಿಂದ ’ತತ್ವಸಾಹಿತ್ಯ’ ಎಂಬ ಹೊಸ ಪ್ರಾಕಾರ ಹುಟ್ಟಿಕೊಂಡಿತು. ತತ್ವ ಸಾಹಿತ್ಯದ ಬಗೆಗೆ ನನ್ನ ತಿಳುವಳಿಕೆ ಅತ್ಯಂತ ಅಲ್ಪ. ಶಿಶುನಾಳ ಷರೀಫರು ತೀರ ಇತ್ತಿಚೆಗೆ ಆಗಿಹೋದ ಅನುಭಾವಿಗಳು. ಶರೀಫರ ಗೀತೆಗಳೂ ಅನುಭಾವ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಮತ್ತು ಬೇಂದ್ರೆ, ಡಿ.ವಿ.ಜಿ, ಪು.ತಿ.ನ ಅವರಂತಹ ನವೋದಯ ಕವಿಗಳ ಕಾವ್ಯದಲ್ಲಿ ಅನುಭಾವದ ಹೊಳಹನ್ನು ಹೇರಳವಾಗಿ ಕಾಣಬಹುದಾಗಿದೆ. ಇವರೆಲ್ಲರ ಕಾವ್ಯಗಳ ಬಗ್ಗೆ ಈ ಶೀರ್ಷಿಕೆಯಡಿ ನನ್ನಿಂದ ಎನನ್ನೂ ಬರೆಯಲು ಸಾಧ್ಯವಾಗಿಲ್ಲ. ಅಲ್ಲದೆ ದಾಸಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕುರಿತಾಗಿಯೂ ಕೂಡ ಅತ್ಯಂತ ಸಂಕ್ಷೇಪವಾಗಿ ಬರೆದಿದ್ದೇನೆ. ಆದುದರಿಂದ ಈ ಎರಡು ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆಯು ಅಷ್ಟು ಸರಿಯಾದುದ್ದಲ್ಲ. ಮತ್ತು ಈ ಲೇಖನಗಳು ಕೇವಲ ಶರಣ ಮತ್ತು ದಾಸ ಸಾಹಿತ್ಯಗಳತ್ತ ವಿಹಂಗಮ ನೋಟವಷ್ಟೇ.

ಮತ್ತೊಂದು ವಿಷಯವೇನೆಂದರೆ ಹಿಂದಿನ ಲೇಖನದಲ್ಲಿ ಕನ್ನಡದ ಜೈನಸಾಹಿತ್ಯದಲ್ಲಿ ಅನುಭಾವದ ಅಂಶಗಳು ಅಷ್ಟಾಗಿ ತೋರುವುದಿಲ್ಲ ಎಂಬ ಮಾತನ್ನು ಹೇಳಿದ್ದೆ. ಆದರೆ ನಿನ್ನೆ ಜೈನ ಸಾಹಿತ್ಯವನ್ನು ತಿಳಿದುಕೊಂಡ ಆತ್ಮೀಯರೊಬ್ಬರಲ್ಲಿ ಮಾತನಾಡುತ್ತ ಜೈನ ಸಾಹಿತ್ಯದಲ್ಲಿ ಕಂಡುಬರುವ ವೈರಾಗ್ಯದ ವರ್ಣನೆ, ತೀರ್ಥಂಕರರನ್ನು ಕುರಿತ ಪ್ರಾರ್ಥನೆಗಳು ಅನುಭಾವದ ಶ್ರ‍ೇಷ್ಠ ಅಭಿವ್ಯಕ್ತಿಗಳು ಎಂಬುದಾಗಿ ಅವರಿಂದ ತಿಳಿಯಿತು. ಜೈನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡದೆ ಜೈನ ಸಾಹಿತ್ಯವು ಅನುಭಾವದ ಗುಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ಹೇಳಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಓದುಗರಲ್ಲಿ ಯಾರಾದರೂ ಜೈನ ಸಾಹಿತ್ಯವನ್ನು ಅಭ್ಯಾಸ ಮಾಡಿದವರಿದ್ದರೆ, ದಯವಿಟ್ಟು ಅಲ್ಲಿ ಕಂಡುಬರುವ ಅನುಭಾವದ ಅಂಶಗಳ ಬಗ್ಗೆ ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.)

Thursday, September 24, 2009

ಕನ್ನಡ ಸಾಹಿತ್ಯದಲ್ಲಿ ಅನುಭಾವ-೧

ಅನುಭಾವ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಅರ್ಥ ಬೆಳೆದು ಬಂದಿದೆ. ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಬರುವ 'ಭಾವ' , 'ವಿಭಾವ', 'ಅನುಭಾವ' ಮುಂತಾದ ಶಬ್ದಗಳು ಕನ್ನಡದ ಈ ಶಬ್ದಕ್ಕೆ ಮೂಲವಾದರೂ, ಕನ್ನಡದಲ್ಲಿ ಅನುಭಾವ ಶಬ್ದ ಇವೆಲ್ಲಕ್ಕಿಂತ ತೀರ ಭಿನ್ನವಾದ ಮತ್ತು ಮಹತ್ವಪೂರ್ಣ ಅರ್ಥ ಪಡೆದುಕೊಂಡಿದೆ. ಅನುಭಾವ ಶಬ್ದಕ್ಕೆ ಸಂಸ್ಕೃತದಲ್ಲಿ ಗ್ರಹಿಕೆ ಎಂಬ ಅರ್ಥವಿದೆ ಅಷ್ಟೇ. ಮತ್ತು ಆ ಶಬ್ದದ ಪ್ರಯೋಗವನ್ನು ಸಾಹಿತ್ಯದಲ್ಲಿ ವ್ಯಾಪಕವಾಗಿ ಎಲ್ಲೂ ಮಾಡಲಾಗಿಲ್ಲ ಕೂಡ. ಆದರೆ ಕನ್ನಡ ಸಾಹಿತ್ಯದಲ್ಲಿ ಅನುಭಾವ, ಸಾಹಿತ್ಯದ ಒಂದು ಪ್ರಾಕಾರವಾಗಿಯೇ ರೂಪುಗೊಂಡುಬಿಟ್ಟಿದೆ. ಸಾಮಾನ್ಯವಾಗಿ, ಯಾವುದೇ ಭಾಷೆಯಲ್ಲಿನ ಶಬ್ದಗಳು ಮತ್ತು ಅವುಗಳಿಂದ ಸ್ಫುರಣಗೊಳ್ಳುವ ಅರ್ಥ ಎರಡೂ ಆಡುಭಾಷೆಯಿಂದ ಆ ಭಾಷೆಯ ಗ್ರಂಥ ಲೇಖನ ಕ್ರಮ ಅಥವಾ ಸಾಹಿತ್ಯಕ್ಕೆ ಸೇರಿಹೋಗುತ್ತವೆ. ಆದರೆ ಕೆಲವೇ ಶಬ್ದಗಳು ಸಾಹಿತ್ಯದಿಂದ ದಿನನಿತ್ಯದ ಭಾಷೆಗೆ ಸೆರ್ಪಡೆಯಾಗುತ್ತವೆ. ಹೀಗೆ ಅನುಭಾವ ಶಬ್ದಕ್ಕೆ ಒಂದು ಮಹತ್ವಪೂರ್ಣವಾದ ಅರ್ಥವೊಂದು ಕನ್ನಡ ಸಾಹಿತ್ಯದಿಂದ ಬೆಳೆದುಬಂದಿದೆ. "ಅನುಭಾವವೆಂಬುದು ಆತ್ಮವಿದ್ಯೆ, ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು." ಎಂಬ ಶಿವಶರಣರ ಮಾತುಗಳಿಂದ ಅನುಭಾವ ಶಬ್ದದ ಅರ್ಥ ಕಲ್ಪನೆಯನ್ನು ಮಾಡಿಕೊಳ್ಳಬಹುದು. ತಮ್ಮ ಅರಿವಿನಿಂದ ಮತ್ತು ಆಚರಣೆಯಿಂದ ಪಡೆದ ಅನುಭವವನ್ನು ಶಿವಶರಣರು ಅನುಭಾವ ಎಂದು ಕರೆದರು. ಹೀಗೆ ಅನುಭಾವ ಶಬ್ದವನ್ನು ತಮ್ಮ ನುಡಿಗಳಲ್ಲಿ ವಚನಗಳಲ್ಲಿ ವ್ಯಾಪಕವಾಗಿ ಬಳಸಿದ್ದು ಮಾನವ ಜೀವನದ ಮಹೋದ್ದೇಶವನ್ನೇ ಒಳಗೊಳ್ಳಬಲ್ಲ ವಿಶಾಲ ಅರ್ಥದಿಂದ ಅದನ್ನು ಶ್ರೀಮಂತಗೊಳಿಸಿದ್ದಾರೆ.


ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಏಕೆಂದರೆ ಸಾಹಿತ್ಯ ರಚನೆ ಮತ್ತು ಅನುಭಾವ ಸಾಹಿತ್ಯದ ಉದ್ದೇಶಗಳು ಬೇರೆ ಬೇರೆ. ಸಾಹಿತ್ಯವೆಂದರೆ, ಒಂದು ಸಾಮಾನ್ಯ ಅರ್ಥದಲ್ಲಿ, ಅದು ಭಾವನಿಷ್ಠವಾದ, ಮನೋಲ್ಲಾಸಗೊಳಿಸುವ ಮತ್ತು ಸ್ವಲ್ಪ ಮಟ್ಟಿಗೆ ನೀತಿ ಸಾರುವ ಬರವಣಿಗೆ. ಆದರೆ, ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ತಾನು ಕಂಡ ಸತ್ಯ ಮತ್ತು ಪಡೆದ ಆ ಆನಂದವನ್ನು ಲೋಕಕಲ್ಯಾಣಕ್ಕಾಗಿ ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ. ಹೊರತೂ ಸಾಹಿತ್ಯರಚನೆಯೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ, ಮುಖ್ಯವಾಗಿ ಹನ್ನೆರಡನೇ ಶತಮಾನದಲ್ಲಿ ಸೃಷ್ಟಿಯಾದ ಶರಣ ಸಾಹಿತ್ಯ ಮತ್ತು ಹದಿನೈದನೇ ಶತಮಾನದಲ್ಲಿ ದಾಸರು ಹಾಡಿದ ದಾಸಸಾಹಿತ್ಯ ಇವೆರಡೂ ಅನುಭಾವ ಸಾಹಿತ್ಯದಲ್ಲಿ ಪ್ರಮುಖವಾದ ಘಟ್ಟಗಳಾಗಿವೆ.

ಶರಣ ಸಾಹಿತ್ಯ
ದರ್ಶನ, ಜೀವನದ ಗುರಿ ಮುಂತಾದ ಮಾತುಗಳಿಂದ ಸಾಹಿತ್ಯ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯ ಸಹಜ. ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಆದರೆ ಆ ’ಅದು’ ಯಾವುದು ಎಂಬುದರ ಮೇಲೆ ’ರಸಾನುಭವ’ ಅಥವಾ ’ಅನುಭಾವ’ ಸಿದ್ದವಾಗುತ್ತದೆ. ಆ ಬಾಹ್ಯ ಸೌಂದರ್ಯದ ಹಿಂದಿರುವ ಚಿರಂತನ ಸೌಂದರ್ಯವನ್ನು ಅನುಭಾವಿ ಕಾಣುತ್ತಾನೆ. ಮತ್ತು ಆನಂದ ಶಬ್ದವನ್ನು ವಿಶಾಲ ಅರ್ಥದಲ್ಲಿ ಪರಿಗಣಿಸಿದಾಗ ಅದು ಕೇವಲ ಮನಸನ್ನು ಉದ್ದೀಪನಗೊಳಿಸುವ ಭಾವ ಮಾತ್ರವಲ್ಲದೇ ಹೃದಯವನ್ನೂ ಧನ್ಯಗೊಳಿಸುವ ಭಾವ. ಅಂತಹ ಶಕ್ತಿಯನ್ನು ಒಳಗೊಂಡಾಗಲೇ ಸಾಹಿತ್ಯ ಸಾರ್ಥಕ. ಆ ಸಾರ್ಥಕತೆಯನ್ನೇ ಶರಣಸಾಹಿತ್ಯ ಪಡೆದಿದೆ.

ಶರಣಸಾಹಿತ್ಯ ಹುಟ್ಟಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ. ಆದ್ದರಿಂದಲೇ ಶರಣರ ವಚನಗಳಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡೂ ಸೇರಿಹೊಗಿದೆ. ಬಸವಣ್ಣ, ಅಲ್ಲಮ ಪ್ರಭು, ಹಾವಿನಾಳ ಕಲ್ಲಯ್ಯ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು ವಚನಗಳ ಮೂಲಕ ಸಾಮಾನ್ಯ ಜನತೆಯಲ್ಲೂ ಆಧ್ಯಾತ್ಮವನ್ನು ಬಿತ್ತಿದರು. ಬಸವಣ್ಣನವರ ಅನುಭವ ಮಂಟಪ ಶರಣರಿಗೆ ನೆಲೆಯಾಗಿ ಶರಣ ಸಾಹಿತ್ಯಕ್ಕೆ ಕೇಂದ್ರವಾಯಿತು.

ಶರಣರು ತೆರೆದ ಕಂಗಳಿಂದ ಜೀವನವನ್ನು ನೋಡಿದವರು. ಅವರ ಅಭಿವ್ಯಕ್ತಿಯ ಪ್ರಬಲವಾದ ಸಂವಹನ ವಚನಗಳ ಮೂಲಕವಾಗಿ ನಡೆದದ್ದು. ಮತ್ತು ಆ ಸಂವಹನವು ಯಶಸ್ವಿಯಾದದ್ದು ಅವರ ವಚನಗಳ ಮಾರ್ಮಿಕತೆಯಿಂದಾಗಿ. ಸಾಹಿತಿ ವಸ್ತುವಿನ ರೂಪವನ್ನು ವರ್ಣಿಸಿದರೆ, ಅನುಭಾವಿ ವಸ್ತುವಿನ ರಹಸ್ಯ ಸ್ವರೂಪವನ್ನು ಕುರಿತು ಯೋಚಿಸುತ್ತಾನೆ. ಶರಣರಲ್ಲಿ ಈ ಶಕ್ತಿಯನ್ನು ಕಾಣುತ್ತೇವೆ. ಲೋಕದ ಘಟನೆಗಳಿಂದ ಅವರ ಮನಸ್ಸು ಕವಿಯಂತೆ ಮಿಡಿಯುತ್ತದೆ. ಆದರೆ ಅಷ್ಟರಲ್ಲೇ ಕೊನೆಗೊಳ್ಳದೇ ಅವರ ಮುಂದಿನ ಸಾಧನೆಗೂ ಪ್ರೆರಣೆಯಾಗಿದೆ. ಆದ್ದರಿಂದಲೇ ಮೋಕ್ಷ, ಸೃಷ್ಟಿ ಮುಂತಾದ ವಿವೇಚನೆಯ ಭಾರವನ್ನು ಶರಣರ ವಚನಗಳು ಸುಲಭವಾಗಿ ಹೊರಬಲ್ಲವು ಮತ್ತು ಕಾವ್ಯಸೌಂದರ್ಯವನ್ನೂ ಬೀರಬಲ್ಲವು.

ಅನಿರ್ವಚನೀಯವಾದ ತಮ್ಮ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಶರಣರ ಸಾಹಸ ಕನ್ನಡ ಭಾಷೆಗೇ ಆಶ್ಚರ್ಯಕರವಾದ ಶಕ್ತಿಯನ್ನು ತಂದು ಕೊಟ್ಟಿದೆ. ಉದಾಹರಣೆಗೆ ಅಲ್ಲಮ ಪ್ರಭುವಿನ ಈ ವಚನವನ್ನೇ ನೋಡಿ.
"ಆದಿ ಅನಾದಿಯಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಯೂನ್ಯವಿಲ್ಲದಂದು
ಸಚಾರಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರನೊಬ್ಬನೇ ಇದ್ದೆಯಲ್ಲ, ಇಲ್ಲದಂತೆ."
ಎಂದು ಅಲ್ಲಮಪ್ರಭುವು ಅವ್ಯಕ್ತವನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.

"ಸಮುದ್ರದೊಳಗೆ ನೆರೆತೊರೆಗಳು ನೆಗಳ್ದವೆಂದರೆ
ಸಮುದ್ರದಿಂದನ್ಯಎಪ್ಪವೇ?
ನಿರ್ವಿಕಾರ, ನಿತ್ಯ, ನಿರಂಜನ, ನಿರ್ಗುಣ, ಪರಿಪೂರ್ಣ, ನಿರ್ವಿಕಲ್ಪ
ಪರಬ್ರಹ್ಮ ಶಿವನಿಂದನ್ಯವೆನ್ನಬಹುದೇ?"
ಸಮುದ್ರದಿಂದ ತೆರೆಗಳು ಎದ್ದರೂ ಸಮುದ್ರದಿಂದ ಭಿನ್ನ, ಅನ್ಯ ಎನ್ನಬಹುದೇ? ಹೀಗೆಯೇ ಸೃಷ್ಟಿಕರ್ತ ಮತ್ತು ಸೃಷ್ಟಿಯ ಸಂಬಂಧ ಎನ್ನುತ್ತಾನೆ ಅಲ್ಲಮ.

"ಗಗನವೇ ಹುಂಡಿಗೆ , ಆಕಾಶವೇ ಅಗ್ಗವಣಿ,
ಚಂದ್ರ ಸೂರ್ಯರಿಬ್ಬರೂ ಪುಷ್ಪ,
ರುದ್ರನೋಗರ, ಸುಯಿಧಾನ ನೋಡಾ,
ಗುಹೇಶ್ವರಲಿಂಗಕ್ಕೆ ಪೂಜೆನೋಡಾ!"
ಗಗನವೇ ಹುಂಡಿ, ಆಕಾಶವೇ ಅರ್ಘ್ಯ, ಸೂರ್ಯಚಂದ್ರರು ಪುಷ್ಪದಂತೆ, ಈ ಸರ್ವ ಸೃಷ್ಟಿಯೇ ಶಿವಲಿಂಗಕ್ಕೆ ಪೂಜೆಯಂತೆ ತೋರುತ್ತದೆ ಅಲ್ಲಮನಿಗೆ. ಪ್ರಭುದೇವನ ಇಂತಹ ವಚನಗಳಲ್ಲಿನ ಭ್ಹವ್ಯವಾದ ಕಲ್ಪನೆ, ಅನುಭವ, ಎಲ್ಲವೂ ಕವೀತ್ವದ ಎಲ್ಲ ಸ್ತರಗಳನ್ನೂ ಮೀರಿಸುತ್ತವೆ. ಪ್ರಭುವೇ ಹೇಳುವಂತೆ ಮಾತೇ ಜ್ಯೋತಿರ್ಲಿಂಗವಾದಂತೆ ತೋರುತ್ತದೆ.

ಅದೃಶ್ಟವನ್ನೂ ದೃಶ್ಟವಾಗಿಸುವ ಕಾವ್ಯ ಶರಣರದ್ದು. ಸರ್ವ ವಸ್ತುಗಳಲ್ಲೂ ವ್ಯಾಪಿಸಿರುವ ಶಿವನನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ.
"ಮರೀಚಿಕೆಯೊಳಗಣ ಬಿಸಿಲಿನಂತೆ ಇದ್ದಿತ್ತ,
ಕ್ಷೀರದೊಳಗಣ ತುಪ್ಪದಂತೆ ಇದ್ದಿತ್ತ,...
ನುಡಿಯೊಳಗಣ ಅರ್ಥದಂತೆ ಇದ್ದಿತ್ತ..."

ಬಸವೇಶ್ವರರ ವಚನಗಳಲ್ಲಿಯಂತೂ ಭಕ್ತಿಯ ಮಿಡಿತ ಎಲ್ಲರ ಚೈತನ್ಯಗಳಲ್ಲಿ ದಿವ್ಯತೆ ತುಂಬುವಂತೆ ಮಾಡುತ್ತದೆ. ಅವರ "ಎನ್ನ ಕಾಲೇ ಕಂಬ, ದೇಹವೇ ದೇಗುಲ, ಸಿರ ಹೊನ್ನ ಕಳಶವಯ್ಯ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.." ಎಂಬ ಮಾತುಗಳಲ್ಲಿ ಅವರ ಸರ್ವಾರ್ಪಣೆ, ಅಹಂಕಾರ ನಿರಸನ ಇವುಗಳನ್ನು ಕಾಣಬಹುದು. ಅನುಭಾವದ ಕುರಿತ ಬಸವಣ್ಣನವರ ನಿಲುವನ್ನು ಈ ವಚನದ ಕೆಲವು ಸಾಲುಗಳಲ್ಲಿ ನೋಡಬಹುದು.
"ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ,
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ ಕೂಡಲ ಸಂಗಮದೇವಾ."
ಮಾತಿನ ಅರ್ಥಕ್ಕೆ ಮೀರಿದ ಪರಿಶುದ್ದ ಭಾವನೆಯನ್ನ ಈ ವಚನದಲ್ಲಿ ಕಾಣಬಹುದು.

ತಮ್ಮ ಸಾಧನೆಯಲ್ಲಿ ಸಿದ್ದಿಯನ್ನು ಪಡೆದ ಶರಣರೆಲ್ಲಾ ಈ ಎತ್ತರಕ್ಕೇ ಏರಿದವರು. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."

ವಚನ ಸಾಹಿತ್ಯದ ಸೌಂದರ್ಯವು ಉಳಿದ ಎಲ್ಲ ಸಾಹಿತ್ಯಗಳಿಗಿಂತ ಮಿಗಿಲಾದದ್ದು. ಅಲ್ಲಿಯವರೆಗೂ ಕನ್ನಡದಲ್ಲಿ ಬಳಕೆಯಲ್ಲಿದ್ದ ಚಂಪೂ ಶೈಲಿಯನ್ನು ಸಡಿಲಗೊಳಿಸಿ ಸರಳವಾದ ಮತ್ತು ಆಕರ್ಷಕವಾದ ಪರಿಣಾಮಕಾರಿಯಾದ ಭಾಷೆಯ ರೂಪವೊಂದನ್ನು ಕನ್ನಡ ಸಾಹಿತ್ಯದಲ್ಲಿ ಶರಣರು ತಂದರು. ತಮ್ಮ ಭಾವನೆಗಳನ್ನು ಮನಮುಟ್ಟುವಂತೆ ಹೇಳುವುದಕ್ಕಾಗಿ ಅವರು ಬಳಸಿಕೊಂಡ ಅಲಂಕಾರಗಳು, ಸಾದೃಶ್ಯಗಳೂ, ವಚನಗಳಿಗೆ ಅನೇಕ ಬಾರಿ ಭಾವಗೀತೆಗಳ ಸ್ವರೂಪವನ್ನು ತಂದು ಕೊಟ್ಟಿವೆ.
ಉದಾಹರಣೆಗೆ,
"ಚಕೋರಂಗೆ ಚಂದ್ರಮನ ಚಿಂತೆ,
ಅಂಬುಜಕೆ ಭಾನುವಿನ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ."

ಎಂಬ ವಚನಗಳಲ್ಲಿನ ಪ್ರಾಸಗಳ ಸೊಬಗು,

"ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ವಾಯು ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ"

ಎನ್ನುವ ವಚನಗಳಲ್ಲಿರುವ ಶ್ಲೇಷೆಯನ್ನಾಗಲಿ ಗಮನಿಸಿದಾಗ ವಚನಕಾರರು ತಮ್ಮ ಭಾಷೆಯಲ್ಲಿ ಸಾಧಿಸಿರುಸುವ ಸಹಜತೆ ಕಾಣುತ್ತದೆ. ಅಲ್ಲದೆ ಅವರು ನೀಡುವ ಉಪಮಾನಗಳು, ರೂಪಕಗಳು ಓದುಗರ ಅನುಭವದ ಪರಿಧಿಯನ್ನೂ ಹೆಚ್ಚಿಸುತ್ತವೆ.

ಶರಣರ ಸ್ವತಂತ್ರ ಮನೋಭಾವ, ಆಚಾರ-ವಿಚಾರಗಳ ಸಮನ್ವಯ ಎಲ್ಲವೂ ಇಂದಿನ ವಿಚಾರವಂತ ಯುಗಕ್ಕೆ ಹೆಚ್ಚಾಗಿ ಹಿಡಿಸುತ್ತವೆ. ಸುಮಾರು ಒಂಭೈನೂರು ವರುಷಗಳ ಹಿಂದೆಯೇ ಶರಣರು ಕಾಯಕದ ಮಹತ್ವವನ್ನೂ ಆದರ್ಶವನ್ನೂ ಸಾರಿದ್ದಾರೆ. ಅವು ಇಂದಿಗೂ ಅಷ್ಟೇ ಪ್ರಸ್ತುತ. ಶರಣರು ತಾವು ಕಂಡ ಉಚ್ಚ ಆದರ್ಶಗಳು, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ, ಹೀಗೆ ಎಲ್ಲವನ್ನೂ ತಮ್ಮ ವಚನಗಳ ಮೂಲಕ ಸರಳವಾದ ಭಾಷೆಯಲ್ಲಿ ವ್ಯಕ್ತವಡಿಸಿದ್ದಾರೆ. ಅಲ್ಲದೇ ಕನ್ನಡ ಭಾಷೆಯನ್ನೂ ಶಕ್ತಿಯುತವನ್ನಾಗಿ ಮಾಡಿದ್ದಾರೆ. ಆದ್ದರಿಂದಲೇ ಶರಣ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಅನುಭಾವ ಸಾಹಿತ್ಯವಾಗಿ ಪರಿಣಮಿಸಿದೆ. ಮತ್ತು ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಒಂದು ಉಜ್ವಲ ಘಟ್ಟವಾಗಿ ಇಂದಿಗೂ ಸಾಮಾನ್ಯ ಜನತೆಯಲ್ಲಿಯೂ ಆನುಭಾವದ ಆನಂದವನ್ನು ನೀಡಿ, ಆಧ್ಯಾತ್ಮದ ಜಾಗೃತಿಯನ್ನು ಮೂಡಿಸುವಲ್ಲಿ ಸಮರ್ಥವಾಗಿದೆ.

(ಅನುಭಾವ ಸಾಹಿತ್ಯದ ಇನ್ನೊಂದು ಪ್ರಮುಖ ಘಟ್ಟ ’ದಾಸ ಸಾಹಿತ್ಯ’. ಆ ಬಗ್ಗೆ ನನ್ನ ಮುಂದಿನ ಪೋಸ್ಟನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.)

Wednesday, September 2, 2009

ಸಾವಿತ್ರಿ

(’ಸಾವಿತ್ರಿ’, ಶ್ರೀ ಅರಬಿಂದೋ ಅವರ ಮಹಾಕಾವ್ಯ. ಶ್ರೀ ಅರಬಿಂದೋ ಅವರ ಎಲ್ಲ ಮಹತ್ವದ ಕ್ರತಿಗಳೂ ಇಂಗ್ಲಿಷ್ ಭಾಷೆಯಲ್ಲಿಯೇ ರಚಿತವಾದವುಗಳಾಗಿದ್ದು ಸಾವಿತ್ರಿಯೂ ಸಹ ಅದೇ ಭಾಷೆಯಲ್ಲಿದೆ. ಅರಬಿಂದೋ ಯೋಗಿಗಳಂತೂ ಸತ್ಯ, ಆದರೆ ಮುಖ್ಯವಾಗಿ ಅವರು ಕವಿಗಳೂ ಹೌದು. ಬಾಲ್ಯದಿಂದಲೇ ಅವರ ಕಾವ್ಯ ಸೃಷ್ಟಿ ಮೂಡತೊಡಗಿತ್ತು. ’Early poems, Last poems' ಎಂಬ ಅವರ ಕವನ ಸಂಕಲನದ ಜೊತೆಗೆ ಗೀತ ನಾಟಕ, ಕಥನಕಾವ್ಯ ಮತ್ತು ಬಂಗಾಲಿಯಲ್ಲಿ ಅನೇಕ ಭಾವಗೀತಗಳು ಪ್ರಕಟವಾಗಿವೆ. ’ಸಾವಿತ್ರಿ’ ಅವರ ಕೃತಿಗಳಲ್ಲಿ ಮಹೋನ್ನತವಾದುದು. ’ಸಾವಿತ್ರಿ’ ಕೃತಿಯು ಅವರ ಜೀವನದ ಉತ್ತರಾರ್ಧದ ೨೫ ವರುಷಗಳ ಅವಧಿಯಲ್ಲಿ ರೂಪುಗೊಂಡಿತು. ಸುಮಾರು ೨೪ ಸಾವಿರ ದೀರ್ಘ್ ಪಾದಗಳನ್ನು ಒಳಗೊಂಡ ಮಹಾಕೃತಿ ’ಸಾವಿತ್ರಿ’. ಈ ಕಥನ ಕಾವ್ಯದಲ್ಲಿ ಬರುವ ’ಮರಣ’ ವನ್ನು ಕುರಿತ ಭಾಗ, ಶ್ರೀ ಅರಬಿಂದೋ ಅವರು ಕೊನೆಯುಸಿರೆಳೆಯುವ ಸ್ವಲ್ಪ ಪೂರ್ವದಲ್ಲಿ ರೂಪುಗೊಂಡಿತು. ತಾವು ಪಡೆದ ಸಾಕ್ಷಾತ್ಕಾರದ ಘಟನೆಯ ನಂತರದ ಅವಧಿಯಲ್ಲಿ ’ಸಾವಿತ್ರಿ’ ಕಾವ್ಯ ರಚನೆಗೊಂಡಿತೆಂದೂ ಹಾಗೂ ಅವರು ಹೊಂದಿದ ಪರಮಸತ್ಯದ ಸಂಪರ್ಕದಿಂದ ಮೂಡಿಬಂದಿತೆಂಬುದಾಗಿ ಅರಬಿಂದೋ ಅವರೇ ಕಾವ್ಯದ ಆರಂಭದಲ್ಲಿ ಹೇಳುತ್ತಾರೆ. ಅನುಭಾವ ಸಾಹಿತ್ಯ ಪ್ರಾಕಾರಗಳಲ್ಲಿ ’ಸಾವಿತ್ರಿ’ ಕೃತಿಯನ್ನು ಕಾವ್ಯರತ್ನವಾಗಿ ಪರಿಗಣಿಸಲಾಗುತ್ತದೆ. ಅರಬಿಂದೋ ಅವರೇ ತಮ್ಮ ’ಸಾವಿತ್ರಿ’ ಕಾವ್ಯದ ಬಗ್ಗೆ ಹೀಗೆನ್ನುತ್ತಾರೆ: " Savitri is an Experiment in Mystic Poetry, Spiritual poetry cast into a symbolic figure." )

’ಸಾವಿತ್ರಿ’ ಕಥನ ಕಾವ್ಯದ ವಸ್ತು, ಮಹಾಭಾರತದ ಅರಣ್ಯಪರ್ವದಲ್ಲಿ ಹೇಳಲಾದ ’ಸಾವಿತ್ರಿ-ಸತ್ಯವಾನರ' ಉಪಾಖ್ಯಾನವನ್ನು ಆಧರಿಸಿದೆ. ಅರಣ್ಯ ಪರ್ವದಲ್ಲಿ, ವನವಾಸವನ್ನು ಅನುಭವಿಸಿತ್ತಿರುವ ಧರ್ಮರಾಜನ ದುಃಖವನ್ನು ಹಗುರಗೊಳಿಸಲು ಮಾರ್ಕಾಂಡೇಯ ಮುನಿಗಳು ಪರಮ ಪತಿವ್ರತೆಯಾದ ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಮಾದ್ರದೇಶದ ಅರಸುವಾದ ಅಶ್ವಪತಿ ಹದಿನೆಂಟು ವರ್ಷಗಳ ಕಠೋರ ವ್ರತವನ್ನು ಆಚರಿಸಿ, ಸಾವಿತ್ರಿ ದೇವಿಯ ಪ್ರೀತ್ಯರ್ಥವಾಗಿ ಒಂದು ಲಕ್ಷ್ಯ ಯಜ್ಞಗಳನ್ನು ಮಾಡಿ ತೇಜಸ್ವಿನಿಯಾದ ಕನ್ಯೆಯೊಬ್ಬಳನ್ನು ಪುತ್ರಿಯಾಗಿ ಪಡೆಯುತ್ತಾನೆ. ಸಾವಿತ್ರಿ ದೇವಿಯ ವರಪ್ರಸಾದದ ಸಂಕೇತವೆಂದು ಪುತ್ರಿಗೆ ’ಸಾವಿತ್ರಿ’ ಎಂದೇ ನಾಮಕರಣವಾಗುತ್ತದೆ. ಸಾವಿತ್ರಿ ಅತ್ಯಂತ ಸುಂದರಿಯೂ, ದಿವ್ಯ ತೇಜಸ್ವಿನಿಯಾಗಿ ಬೆಳೆದು ನಿಲ್ಲಲಾಗಿ ಅವಳನ್ನು ವರಿಸಲು ತರುಣರೆಲ್ಲ ಹಿಂಜರಿಯುತ್ತಾರೆ. ಇದರಿಂದ ಚಿಂತಿತನಾದ ಅಶ್ವಪತಿಯು ಮಗಳಿಗೆ ’ನಿನ್ನ ಪತಿಯನ್ನು ನೀನೇ ಶೋಧಿಸು’ ಎಂಬುದಾಗಿ ಹೇಳಿ ದೇಶಸಂಚಾರದ ಸಿದ್ಧತೆ ಮಾಡಿದನು. ಆಕೆ ಎರಡು ವರ್ಷಗಳ ಕಾಲ ದೇಶವನ್ನೆಲ್ಲ ಸಂಚರಿಸಿ ಮರಳಿ ಬಂದು, ಸಾಲ್ವದೇಶದ ಅರಸು ಕುವರನಾದ ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಸತ್ಯವಾನನು, ರಾಜ್ಯವನ್ನು ಕಳೆದುಕೊಂಡ ಮತ್ತು ಅಂಧನಾದ ತನ್ನ ತಂದೆಯೊಂದಿಗೆ ತಪೋವನದಲ್ಲಿ ವಾಸಿಸುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ನಾರದರು ಸತ್ಯವಾನನು ತೇಜಸ್ವಿ, ಶೂರ, ವಿನಯಶೀಲ ಹಾಗು ಶಾಂತನು. ಆದರೂ ಸತ್ಯವಾನನು ಅಲ್ಪಾಯುಶಿಯಾದ್ದರಿಂದ ಬೇರೊಬ್ಬ ವರನನ್ನು ವರಿಸುವಂತೆ ಸಾವಿತ್ರಿಯಲ್ಲಿ ಆಗ್ರಹಿಸುತ್ತಾರೆ. ಆದರೆ ಸಾವಿತ್ರಿಯು ಒಪ್ಪದೆ ಸತ್ಯವಾನನ್ನೇ ವರಿಸಿ ಅವನೊಂದಿಗೆ ಸಂತೋಶದಿಂದ ಜೀವನ ನಡೆಸುತ್ತಿರಲಾಗಿ ಸತ್ಯವಾನನು ಅಕಾಲ ಮರಣವನ್ನಪ್ಪುತ್ತಾನೆ. ಆದರೆ ಸಾವಿತ್ರಿಯು ತನ್ನ ಪತಿಯ ಜೀವವನ್ನು ಸೆಳೆದ ಯಮಧರ್ಮನನ್ನು, ಪತಿಯನ್ನು ಹಿಂದುರಿಗಿಸೆಂದು ಹಿಂಬಾಲಿಸುತ್ತಾಳೆ. ಅವಳ ಮನೋಧೈರ್ಯ ಮತ್ತು ವಾಕ್ಚಾತುರ್ಯಗಳನ್ನು ಮೆಚ್ಚಿದ ಧರ್ಮನು ಪತಿಯ ಜೀವವನ್ನೊಂದನ್ನು ಬಿಟ್ಟು ಬೇಕಾದ ಯಾವುದಾದರೂ ನಾಲ್ಕು ವರಗಳನ್ನು ಕೇಳು ಎನ್ನಲಾಗಿ ಸಾವಿತ್ರಿಯು ತನ್ನ ಮಾವನಿಗೆ ಕಣ್ಣು, ಮತ್ತು ರಾಜ್ಯವನ್ನು ಹಾಗೂ ತನ್ನ ತಂದೆಗೆ ಪುತ್ರಶತ ಭಾಗ್ಯವನ್ನೂ ಬೇಡುತ್ತಾಳೆ. ಹಾಗೂ ಕೊನೆಯದಾಗಿ ತನಗೂ ಸತ್ಯವಾನನಿಗೂ ಪುತ್ರಶತಲಾಭವಾಗಲೆಂದು ಕೇಳಿಕೊಳ್ಳುತ್ತಾಳೆ. ಎಲ್ಲವೂ ಸಿದ್ದಿಸಲೆಂದು ಆಶಿರ್ವದಿಸಿದ ಯಮಧರ್ಮನು ಇನ್ನು ಹೊರಡೆನ್ನುತ್ತಾನೆ. ಅದಕ್ಕೆ ಸಾವಿತ್ರಿಯು ಸತ್ಯವಾನನಿಲ್ಲದೇ ನಾಲ್ಕನೇ ವರದ ಸಿದ್ದಿಯು ಹೇಗೆ ಸಾಧ್ಯವೆನ್ನಲಾಗಿ ಅವಳ ಭಕ್ತಿಯನ್ನು ಮೆಚ್ಚಿದ ಧರ್ಮನು ಸತ್ಯವಾನನ್ನು ತನ್ನ ಪಾಶದಿಂದ ಮುಕ್ತಗೊಳಿಸಿ ಆಶೀರ್ವದಿಸಿ ಕಳಿಸುತ್ತಾನೆ. ಇದು ಮೂಲ ಮಹಾಭಾರತದಲ್ಲಿನ ಕಥೆ.

ಕೆಲವೇ ಸಾಲುಗಳಲ್ಲಿ ವ್ಯಾಸರು ಉಲ್ಲೇಖಿಸಿದ ಈ ಸುಂದರ ಕಥೆಯನ್ನು ಶ್ರೀ ಅರಬಿಂದರು ಹನ್ನೆರಡು ಅಧ್ಯಾಯಗಳಲ್ಲಿ ಹೇಳುತ್ತಾರೆ. ಮೊದಲ ಅಧ್ಯಾಯ ’The Book of Beginnings'. ಅದರ ಪ್ರಥಮ ಸರ್ಗದಲ್ಲಿ ಸಾಂಕೇತಿಕ ಅರುಣೋದಯದ ಚಿತ್ರವಿದೆ. ಸಾವಿತ್ರಿ ಎಚ್ಚರಗೊಳ್ಳುತ್ತಾಳೆ. ಸತ್ಯವಾನನು ಸಾಯುವ ದಿನವದು. ವಿಧಿಲಿಖಿತವನ್ನು ಬದಲಿಸಲು ಯಾರಿಗೆ ಸಾಧ್ಯ ಎಂದು ಹೇಳುತ್ತಲೇ ಸಾವಿತ್ರಿಯ ತಂದೆಯಾದ ಅಶ್ವಪತಿ ಮಹಾರಾಜನು ಹೇಗೆ ತನ್ನ ಯೋಗಸಾಧನೆಯಿಂದ ಸಾವಿತ್ರಿಯನ್ನು ಪುತ್ರಿಯಾಗಿ ಪಡೆದನೆಂಬ ವಿವರಣೆಯೊಂದಿಗೆ flash-back ಹೇಳುತ್ತ ಹೋಗುತ್ತಾರೆ. "A world's desire compelled her birth- ವಿಶ್ವದ ಹಿರಿ ಹಂಬಲವೇ ಸಾವಿತ್ರಿ ಜನ್ಮ ತಾಳಲು ಒತ್ತಾಯಪಡಿಸಿತು" ಎಂಬ ಮಾತನ್ನಾಡುತ್ತಾರೆ. ಹೀಗೆ ಸಾವಿತ್ರಿಯ ಜನನದ ಹಾಗೂ ಬೆಳವಣಿಗೆಯ ಕಥೆಯನ್ನು ’The book of Traveller of the worlds', 'The book of Divine Mother' ಮತ್ತು 'The book of Birth and Quest' ಎಂಬ ಮೂರು ಅಧ್ಯಾಯಗಳಲ್ಲಿ ಶ್ರೀ ಅರಬಿಂದೋ ವರ್ಣಿಸುತ್ತಾರೆ.

ಐದನೇಯ ಅಧ್ಯಾಯ ’The Book of Love'. ಈ ಅಧ್ಯಾಯದಲ್ಲಿ ಸಾವಿತ್ರಿಯು ತನ್ನ ವರನನ್ನು ಶೋಧಿಸಲು ಸಂಚರಿಸಿದ ವರ್ಣನೆ ಇದೆ. ಕೊನೆಯದಾಗಿ ಆಕೆ ಸತ್ಯವಾನನು ತನ್ನ ತಂದೆಯಾದ ದ್ಯುಮತ್ ಸೇನನ ಜೊತೆಗೆ ವಾಸಿಸುತ್ತಿರುವ ಅಶ್ರಮವನ್ನು ಪ್ರವೇಶಿಸುತ್ತಾಳೆ. ಅಲ್ಲಿನ ಪ್ರಕೃತಿಯ ವರ್ಣನೆಯನ್ನು ಕವಿ ಅತೀ ಸುಂದರವಾಗಿ ಮಾಡುತ್ತಾರೆ. ಅದು ’World of free and green delight' ಆಗಿತ್ತು ಎನ್ನುತ್ತಾರೆ. ಅಲ್ಲಿನ ವಾತಾವರಣದಲ್ಲಿ ಮೃದುತ್ವವಿತ್ತು, ಸೂಕ್ಶ್ಮ್ತೆತೆಯಿತ್ತು. ಆ ಆಶ್ರಮದಲ್ಲಿ ಸತ್ಯವಾನನ್ನು ಸಾವಿತ್ರಿ ನೊಡುತ್ತಾಳೆ. "her vision settled, caught and all was changed" - "ಆಕೆಯ ಕಣ್ಣು ಸ್ಥಿರವಾಗಿ ಅಲ್ಲಿಯೇ ನಿಂತಿತು, ಮತ್ತು ಎಲ್ಲವೂ ಪಲ್ಲಟವಾಯಿತು." ಎಂದು ಸಾವಿತ್ರಿಯ ಮನ ಸತ್ಯವಾನನಲ್ಲಿ ಸೇರಿದ್ದನ್ನು ಸುಂದರವಾಗಿ ಬಣ್ಣಿಸುತ್ತಾರೆ. "A mystic tumult from her depths arose"- "ಒಂದು ಅವಿದಿತ ಹರ್ಷ ಅವಳ ಆಂತರ್ಯದಿಂದ ಹೊರಹೊಮ್ಮಿತು." ಹೀಗೆ ಸತ್ಯವಾನನೊಂದಿಗೆ ಪರಸ್ಪರ ಸಂದರ್ಶನ-ಸಂಭಾಷಣೆಗಳಾದ ನಂತರ ವಿವಾಹದ ನಿರ್ಧಾರವಾಗುತ್ತದೆ. "The united Two began a greater age."-"ಅವರ ಮಿಲನವು ಅದೊಂದು ಉನ್ನತ ಯುಗವನ್ನೇ ನಿರ್ಮಿಸಿತು."

ಆರನೇ ಅಧ್ಯಾಯ ’The book of Fate'. ಸಾವಿತ್ರಿಯು ತನ್ನ ಸಂಚಾರವನ್ನು ಮುಗಿಸಿ ತನ್ನ ತಂದೆಯ ಮನೆಗೆ ಮರಳುತ್ತಾಳೆ. ಆ ಸಮಯದಲ್ಲಿ ಅಲ್ಲಿಯೇ ಇರುವ ನಾರದ ಮಹರ್ಷಿಗಳು ಸಾವಿತ್ರಿಯ ಅಪ್ರತಿಮ ಸೌಂದರ್ಯವನ್ನು ನೋಡಿ ಮಾಡಿದ ಭಾಷಣವು ವಿಶ್ವಸಾಹಿತ್ಯದಲ್ಲೇ ಒಂದು ಅಪೂರ್ವ ಕಾವ್ಯಭಾಗವೆಂದು ಹೇಳಲಾಗುತ್ತದೆ. ನಂತರ ಸಾವಿತ್ರಿಯು ತನ್ನ ಸಂಚಾರವನ್ನು ಕುರಿತು ವಿವರಿಸುತ್ತಾಳೆ. ಮತ್ತು ತಾನು ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಆಗ ನಾರದರು ಪ್ರಮಾದವಾಯಿತೆಂಬಂತೆ ಗಾಬರಿಯಾಗಿ ಸತ್ಯವಾನನು ಅಲ್ಪಾಯುಶಿಯೆಂದೂ ಇವತ್ತಿಗೆ ಸರಿಯಾಗಿ ಒಂದು ವರ್ಷಕ್ಕೆ ಮೃತ್ಯುಯೋಗವಿದೆಯೆಂದೂ ಹೇಳುತ್ತಾರೆ. ಆಗ ಚಿಂತೆಗೊಳಗಾಗುವ ಸಾವಿತ್ರಿಯ ತಂದೆಯು ಬೇರೊಬ್ಬ ವರನನ್ನು ಆರಿಸಲು ಕೇಳಿಕೊಳ್ಳುತ್ತಾನೆ. ಆಗ ಸಾವಿತ್ರಿಯು "ಪೂಜ್ಯ ಪಿತನೇ, ಏನೇ ಇರಲಿ, ಕೆಲವು ಸಂಗತಿಗಳನ್ನು ಒಮ್ಮೆಮಾತ್ರ ನಿರ್ಧರಿಸಲು ಸಾಧ್ಯ", " My father I have chosen. This is done." ಎಂದು ತನ್ನ ಅಚಲ ನಿರ್ಧಾರವನ್ನು ಹೇಳುತ್ತಾಳೆ. ಮೆಚ್ಚಿದ ನಾರದರು "The soul that can live alone with itself meets God" - "ಏಕಾಂಗಿಯಾಗಿ (ಸ್ವತಂತ್ರವಾಗಿ) ಇರಬಲ್ಲ ಜೀವಾತ್ಮ ಮಾತ್ರ ದೇವರ ದರ್ಶನ ಪಡೆಯುತ್ತದೆ" ಎಂದು ಹೇಳುತ್ತಾ ಆಕೆಯನ್ನು ಆಶೀರ್ವದಿಸಿ ಅವಳ ತಂದೆಯನ್ನು ಉದ್ದೇಶಿಸಿ "Alone she is equal to her mighty task" ಅವಳನ್ನು ಅವಳ ಮಟ್ಟಿಗೆ ಬಿಟ್ಟು ಬಿಡಿ ಎನ್ನುತ್ತಾರೆ. ಸಾವಿತ್ರಿ ಸತ್ಯವಾನರ ಮದುವೆಯು ಸೌಖ್ಯವಾಗಿ ನೆರವೇರಿ ಸಾವಿತ್ರಿಯು ಸತ್ಯವಾನನೊಂದಿಗೆ ತಪೋವನದಲ್ಲಿ ಸುಖದಿಂದ ಬದುಕುತ್ತಿರುತ್ತಾಳೆ.

'The Book of Yoga' ಏಳನೇ ಅಧ್ಯಾಯ. ಈ ಅಧ್ಯಾಯದಲ್ಲಿ ಸಾವಿತ್ರಿ ಸತ್ಯವಾನರ ಸುಖದ ದಾಂಪತ್ಯ ಜೀವನದ ವರ್ಣನೆ ಇದೆ. ಅವಳು ಆಶ್ರಮದ ಎಲ್ಲ ಕೆಲಸಗಳನ್ನು ಅತ್ಯಂತ ಪ್ರೇಮದಿಂದ ಗೈಯುತ್ತಿದ್ದಳು. ಅವುಗಳಲ್ಲೆಲ್ಲಾ 'A strange divinity shone- ಒಂದು ವಿಚಿತ್ರ ದೈವಿಕತೆ ಹೊಳೆಯತೊಡಗಿತು' ಎನ್ನುತ್ತಾರೆ ಅರಬಿಂದೋ. ಆದರೆ ವರ್ಷದ ಕೊನೆಯಾಗುತ್ತಿದ್ದಂತೆ ಸಾವಿತ್ರಿಗೆ ಸತ್ಯವಾನನ ವಿಧಿಲಿಖಿತ ನೆನಪಾಗತೊಡಗುತ್ತದೆ. "The grief of all the world came near to her- ಜಗತ್ತಿನ ದುಃಖವೆಲ್ಲವೂ ಆಕೆಯ ಬಳಿಗೆ ಬಂತು." ಆದರೂ ಆಕೆ ದುಃಖವನ್ನು ಯಾರಿಗೂ ತೋರಗೊಡಲಿಲ್ಲ. ಅವಳಿಗೆ ಇರುಇರುತ್ತಲೇ ಉತ್ಕಟ ಧ್ವನಿಯೊಂದು ಕೇಳತೊಡಗುತ್ತದೆ. "Find your soul, recover thy hid self- ನಿನ್ನ ಅಂತರಾತ್ಮವನ್ನು ಹುಡುಕು. ನಿನ್ನ ಆಳದಲ್ಲಿ ಅಡಗಿದ್ದನ್ನು ಹೊರತೆಗೆ". ಆಕೆ ತನ್ನನ್ನು ತಾನು ದೇಹಭಾವದಿಂದ ಬಿಡಿಸಿಕೊಂಡು ತನ್ನ ಆಂತರ್ಯದತ್ತ ನೋಡತೊದಗುತ್ತಾಳೆ. ಅಂತರಿಕ ಅಗ್ನಿ (Occult Fire) ಬಳಿ ಆಕೆ ಬರುತ್ತಾಳೆ. ಈ ಧ್ಯಾನದ ಸಮಯದಲ್ಲಿ ಆಕೆಗೆ ಆಂತರ್ಯದಲ್ಲಿ ಅನೇಕ ಅಡಚಣೆಗಳ ಅರಿವಾಗುತ್ತದೆ. ಅವನ್ನೆಲ್ಲವನ್ನು ಶ್ರೀ ಅರಬಿಂದೋ ವ್ಯಕ್ತಿಯಾಗಿಸುತ್ತಾರೆ (Personification). ಅವುಗಳನ್ನು 'The Mother of Seven Sorrows' ಎಂದು ಕರೆಯುತ್ತಾರೆ. ಆದರೆ ಸಾವಿತ್ರಿಯು ತನ್ನ ಆತ್ಮದ ತತ್ವದ ಅಂಶ (Part of The Soul) ಗಳೇ ಎಂದು ಭಾವಿಸಿ ಅವುಗಳಿಂದಲೂ ಆಧ್ಯಾತ್ಮದ ನೆರವು ಪಡೆಯುತ್ತಾಳೆ. ಅಧ್ಯಾಯದ ಕೊನೆಯಲ್ಲಿ ಅವಳು "She was no more herself but all the World- ಆಕೆ ಕೇವಲ ಅವಳು ಮಾತ್ರವಾಗಿರದೆ ಸಮಸ್ತ ವಿಶ್ವವೇ ಆಗಿದ್ದಳು." ಎನ್ನುತ್ತಾರೆ.

"The book of Death" ಎಂಟನೆಯ ಅಧ್ಯಾಯ. ಇಲ್ಲಿಂದ ಮತ್ತೆ ಕಥೆಯು 'flash back' ಮುಗಿದ ನಂತರದಲ್ಲಿ ಮುಂದುವರೆಯುತ್ತದೆ. ಆಕೆ ಬೆಳಗಿನಲ್ಲೆದ್ದು ಸತ್ಯವಾನನು ಶಿಲೆಯೊಂದರಲ್ಲಿ ಕಡೆದ ಮೂರ್ತಿಯೊಂದಕ್ಕೆ ನಮಿಸಿ ನಿತ್ಯದ ಕಾರ್ಯಗಳಲ್ಲಿ ತೊಡಗುತ್ತಾಳೆ. ಸತ್ಯವಾನ ಕಟ್ಟಿಗೆಗಾಗಿ ಕಾಡಿಗೆ ಹೊರಡಲಾಗಿ ತಾನೂ ಅವನ ಜೊತೆಗೆ ಹೋಗಿಬರುತ್ತೇನೆಂದು ಅತ್ತೆ ಮಾವಂದಿರ ಅಪ್ಪಣೆ ಪಡೆದು ಹೊರಡುತ್ತಾಳೆ. ಮುಂದಿನ ಕ್ಷಣ ಕ್ಷಣವೂ ಆಕೆಯನ್ನು ವಿಹ್ವಲ ಗೊಳಿಸುತ್ತದೆ. ಆದರೆ ಇದರ ಅರಿವಿಲ್ಲದ ಸತ್ಯವಾನನು ಮರವೊಂದನ್ನು ಕಡಿಯುತ್ತಿರುವಾಗ ಒಮ್ಮೆಲೇ ಕಡಿದ ಆ ಮರದ ವೇದನೆ ತನಗೆ ಆದಂತೆ ಭಾಸವಾಯಿತೆಂದು ಹೇಳತೊಡಗುತ್ತಾನೆ. ಸಾವಿತ್ರಿ ತಕ್ಷಣವೇ ಅವನನ್ನು ಮಲಗಿಸಿ ಅವನ ಶಿರವನ್ನು ತನ್ನ ಮಡಿಲಲ್ಲಿರಿಸಿಕೊಳ್ಳುತ್ತಾಳೆ. ಆಗ ಸತ್ಯವಾನನು "Savitri, Oh savitri, Lean down, my soul, and kiss me while I die - ನನ್ನ ಪ್ರಾಣಸ್ವರೂಪಳಾದ ಸಾವಿತ್ರಿಯೇ ಬಾಗಿ ಒಂದು ಮುದ್ದು ಕೊಡು ನಾನು ಸಾಯುತ್ತಿರುವೆ" ಎಂದು ನರಳುತ್ತಾನೆ. ಅವಳು ಸತ್ಯವಾನನ್ನು ಅಪ್ಪಿ ಹಿಡಿದು ಕೊನೆಯ ಮುದ್ದನ್ನು ಸಲ್ಲಿಸುತ್ತಾಳೆ. ಸತ್ಯವಂತನ ಜೀವವು ಆಕೆಯ ಅಪ್ಪುಗೆಯಿಂದ ಜಾರಿ ಹೋಗುತ್ತದೆ.

ಒಂಬತ್ತನೇ ಅಧ್ಯಾಯವಾದ "The Book of Eternal Night" ಮೃತ್ಯುವು ಸತ್ಯವಾನನ ಪ್ರಾಣವನ್ನು ಸೆಳೆದುಕೊಂದು ಹೊರಡುತ್ತಾನೆ. ಸಾವಿತ್ರಿಯು ಸೂಕ್ಷ್ಮಶರೀರದಲ್ಲಿ ಆತನನ್ನು ಹಿಂಬಾಲಿಸುತ್ತಾಳೆ. ಇಲ್ಲಿಯ ವರೆಗೆ ನಡೆದುದ್ದೆಲ್ಲ ಪೃಥ್ವಿಯ ವಾತಾವರಣದಲ್ಲಿ. ಮುಂದಿನ ಘಟನೆಗಳು ಸಾವಿತ್ರಿಯ ಆಂತರ್ಯದಲ್ಲಿ ನಡೆದಂತೆ ಅರಬಿಂದೋ ನಿರೂಪಿಸುತ್ತಾರೆ. ಯಮನನ್ನು ಹಿಂಬಾಲಿಸುತ್ತಾ ಅವಳು ಗಾಢಾಂಧಕಾರದಲ್ಲಿ ಇಳಿದಳು. ಅಲ್ಲಿನ ತಮಸ್ಸು ಆಕೆಯನ್ನು "ಇಲ್ಲಿಗೂ ಬರಬಲ್ಲೆಯ? ಇಲ್ಲಿಯೂ ಜೀವಿಸಬಲ್ಲೆಯ?" ಎಂದು ಪ್ರಶ್ನಿಸಿತು. ಅದಕ್ಕೆ ಸಾವಿತ್ರಿಯ ಮೌನವೇ ಉತ್ತರವಾಯಿತು. ಆಗ ಧರ್ಮನು "ಸತ್ಯವಾನನನ್ನು ಬಿಟ್ಟು ಕೆಲವೊಂದು ವರಗಳನ್ನು ಕೊಡುವೆ, ನಿನ್ನ ಗಾಯಗೊಂಡ ಬದುಕಿಗೆ." ಎನ್ನಲಾಗಿ ಸಾವಿತ್ರಿಯು "I bow not to thee, O huge mask of death... Conscious of immortality I walk. My god is love and sweetly suffers all- ಓ ಸಾವಿನ ಮುಸುಕೆ, ನಿನಗೆ ನಾನು ತಲೆಬಾಗುವುದಿಲ್ಲ. ಆ ಅಮೃತತ್ವದ ಅರಿವಿಂದಲೇ ನಾನು ಮುನ್ನಡೆಯುತ್ತೇನೆ. ಪ್ರೇಮವೇ ನನ್ನ ದೇವರು. ಆ ದೇವರೇ ಮಧುರವಾಗಿ ಸಕಲವನ್ನು ತಾಳಿಕೊಳ್ಳುವವ" ಎಂದು ನುಡಿಯುತ್ತಾಳೆ.

ಹತ್ತನೇ ಅಧ್ಯಾಯ "The Book of the Double Twilight". ಮೃತ್ಯುವು ಸಾವಿತ್ರಿಯನ್ನು ಕುರಿತು " ಸಾವಿತ್ರಿಯೇ, ಭೂಲೋಕದ ಮಾನವೀಯ ಹಂಬಲಗಳನ್ನು ತೊರೆದು ಬಿಡು." ಎನ್ನುತ್ತಾನೆ. " My love is not a craving of the flesh.. It came to me from God, go God it returns. I cherish God the Fire- ನನ್ನ ಪ್ರೇಮವು ಭಗವಂತನಿಂದ ಬಂದದ್ದು. ಅವನೆಡೆಗೇ ಹೊರಟಿದೆ. ನನ್ನ ಅಭೀಪ್ಸೆ ಆ ಅಗ್ನಿ ಸ್ವರುಉಪನಾದ ದೇವನದ್ದು" ಎನ್ನುತ್ತಾಳೆ ಸಾವಿತ್ರಿ. ಹೀಗೆ ಮೃತ್ಯು ಮತ್ತು ಸಾವಿತ್ರಿಯರಲ್ಲಿ ದೀರ್ಘವಾದ ವಾದ - ವಿವಾದಗಳು ನಡೆಯುತ್ತವೆ. ಕೊನೆಯಲ್ಲಿ ಸಾವಿತ್ರಿಯು ತನ್ನ ತೆಜೋಮಯವಾದ ದಿವ್ಯ ರೂಪದನ್ನು (ಸಾವಿತ್ರಿ ದೇವಿಯ) ಮೃತ್ಯುವನ್ನು ಉದ್ದೇಶಿಸಿ "I am a deputy of the aspiring world, my siprits liberty I ask for all" - "ತಾನು ಜಗತ್ತಿನ ಅಭೀಪ್ಸೆಯ ಪ್ರತಿನಿಧಿಯೆಂದೂ, ತನಗಿದ್ದ ಆತ್ಮದ ಸ್ವಾತಂತ್ಯ್ರ ಸಕಲರಿಗೆ ಇರಲಿ" ಎಂದು ಉದ್ದರಿಸುತ್ತಾಳೆ. ""Release the soul of the world called Satyavan"- ಜಗದಾತ್ಮನಾದ ಸತ್ಯವಾನನ್ನು ಬಿಡುಗಡೆಗೊಳಿಸು." ಎನ್ನುತ್ತ್ತಾಳೆ. ಮೃತ್ಯುವು ಅವಳ ದಿವ್ಯ ಸ್ವರೂಪಕ್ಕೆ ಬೆರಗಾಗಿ ತತ್ತರಿಸುತ್ತಾನೆ. ಆಕೆಯ ಆಜ್ಞೆಯನ್ನು ಪಾಲಿಸದಿರಲು ಅವನಲ್ಲಿ ಯಾವ ಬಲವೂ ಉಳಿಯುವುದಿಲ್ಲ. "His body was eaten by the light- ಅವನ ದೇಹವನ್ನು ಬೆಳಕು (ದೇವಪ್ರಕಾಶವು) ನುಂಗಿಬಿಟ್ಟಿತು" ಎನ್ನುತ್ತಾರೆ ಕವಿ. ಸಾವಿನ ನೆರಳು ಕರಗಿಹೋಯಿತು. ನಂತರ ಆ ದಂಪತಿಗಳು ತೆಜೋರೂಪದಲ್ಲಿ ಪರಮಪುರುಷನಾದ ಭಗವಂತನಲ್ಲಿಗೆ ತಲುಪುತ್ತಾರೆ.

"The Book of Ever Lasting Day" ಹನ್ನೊಂದನೆಯ ಅಧ್ಯಾಯ. ಅಲ್ಲಿ ಪರಮಪುರುಷನು ದಂಪತಿಗಳನ್ನು ಭುವಿಗೆ ಮರಳದೆ ಸತ್ಯಲೋಕದಲ್ಲಿಯೇ ಇರಲು ಕೇಳುತ್ತಾನೆ. ಅದಕ್ಕೆ ಸಾವಿತ್ರಿಯು ನಿನ್ನ ಮಾಧುರ್ಯವನ್ನು ಭೂಲೋಕಕ್ಕೆ ಹಂಚಲು ತನಗೆ ಅನುಗ್ರಹಿಸು ಎಂದು ಕೇಳಿಕೊಳ್ಳುತ್ತಾಳೆ. ಅಂತೆಯೇ ಸಾವಿತ್ರಿ ಸತ್ಯವಾನರು ಭುವಿಗೆ ಮರಳುತ್ತಾರೆ. ಕೊನೆಯ ಅಧ್ಯಾಯ "Epilogue- ಮುಕ್ತಾಯ" . ತಪೋವನಕ್ಕೆ ಮರಳಿದ ಸಾವಿತ್ರಿ ಸತ್ಯವಾನರು ಸುಖದಿಂದ ಜೀವನ ನಡೆಸುತ್ತಾರೆ. ಸಾವಿತ್ರಿಯು ತನ್ನ ಜೀವನದ ಉದ್ದೇಶವನ್ನು ಹೀಗೆ ಹೇಳುತ್ತಾಳೆ: "That to feel love and oneness is to live.. Is all the truth I know or Seek.- ಪ್ರೇಮವನ್ನೂ ಏಕತೆಯನ್ನೂ ಅನುಭವಿಸುವುದೇ ಜೀವನ. ಅದೊಂದೇ ಸತ್ಯ. ಅದನ್ನೇ ನಾನು ಬಲ್ಲೆ ಮತ್ತು ಅದನ್ನೇ ನಾನು ಅರಸುತ್ತೇನೆ."

ಈ ಮಹಾಕಾವ್ಯದ ಉದ್ದೇಶವೂ ಅದೇ. ಪ್ರೇಮವನ್ನೂ ಏಕತೆಯನ್ನು ಅನುಭವಿಸುವುದೇ ಜೀವನ ಎಂಬ ಪರಮ ಸತ್ಯವನ್ನು ಜಗತ್ತಿಗೆ ತಿಳಿಸುವುದು. ಈ ಕಾವ್ಯದ ಯಾವ ಅಂಶವೂ ಮನೋಮಯ ಸ್ತರದಿಂದ ಹೊರಬಂದಿಲ್ಲ. ಈ ಕಾವ್ಯದಲ್ಲಿನ ಪ್ರತಿಯೊಂದು ಶಬ್ದವೂ, ಛಂದ, ತಾಳ, ಕಲ್ಪನೆ ಎಲ್ಲವೂ ಕವಿಯ ಆ ಉಚ್ಚಪ್ರಜ್ಞೆಯ ಪ್ರತೀಕವೆಂಬಂತೆಯೇ ಇವೆ. ಶ್ರೀ ಅರಬಿಂದೋ ಅವರೇ ಉದ್ದರಿಸಿರುವಂತೆ "ಭಗವತ್ ಸ್ಪರ್ಶವೊಂದಿದ್ದರೆ ಸಕಲವನ್ನೂ ಮಾಡಲು ಸಾಧ್ಯ" ಎಂಬ ಮಾತು ಈ ಸುಂದರ ಅನುಭಾವ ಕಾವ್ಯದ ಮೂಲಮಂತ್ರ.

Monday, June 22, 2009

ವಿಮರ್ಶೆ

ಸಾಹಿತ್ಯ ವಿಮರ್ಶೆ ಎಂಬ ಪ್ರಾಕಾರ ನಮ್ಮಲ್ಲಿ ಆರಂಭವಾದದ್ದು ಪಾಶ್ಚಿಮಾತ್ಯರ ಪ್ರಭಾವದಿಂದ. ಬಹುಶಃ ಅದರ ಜೊತೆಗೇ ಸಾಹಿತ್ಯಕ್ಕೂ ಅದರ ವಿಮರ್ಶೆಗೂ ಇರುವ ವಿರೋಧ ಸಂಬಂಧವೂ ಕೂಡ. ಪ್ರಾಚೀನ ಕಾಲದಲ್ಲಿ ನಮ್ಮಲ್ಲಿ ಕಾವ್ಯಗಳಿಗೆ ಟೀಕೆ ಟಿಪ್ಪಣಿ, ವ್ಯಾಖ್ಯಾನ ಮತ್ತು ಭಾಷ್ಯಗಳನ್ನು ಬರೆಯುತ್ತಿದ್ದರು. ಅವುಗಳಲ್ಲಿ ಕಾವ್ಯಗಳ ವಿಶ್ಲೇಷಣೆ ಇದ್ದರೂ ಅವು ಸಾಹಿತ್ಯ ವಿಮರ್ಶೆ ಅಥವಾ ಕಾವ್ಯ ವಿಮರ್ಶೆಯೆಂಬ ಹೆಸರನ್ನು ಪಡೆದುಕೊಂಡಿರಲಿಲ್ಲ. ಹಿಂದಿನ ಟೀಕಾಕಾರರುಗಳೆಲ್ಲರ ಉದ್ದೇಶ ಒಬ್ಬ ಕವಿಯ ಕಾವ್ಯ ಪೋಷಣೆಗೆ ಅನುಕೂಲಕರವಾದ ಮತ್ತು ಕಾವ್ಯ ಓದುವಿಕೆಗೆ ನೆರವಾಗುವ ಟೀಕೆ ಟಿಪ್ಪಣಿಗಳನ್ನು ಬರೆಯುವುದಾಗಿತ್ತು. ಈ ಟೀಕಾ ಪ್ರಾಕಾರದ ಸ್ವರೂಪ ಆಧುನಿಕ ಕಾಲದಲ್ಲಿ ಹೆಚ್ಚು ಹೆಚ್ಚು ಅಂತರ್ಮುಖವಾಗತೊಡಗಿತು.


ಸಾಹಿತ್ಯದ ಮೌಲ್ಯ ಮಾಪನ ವಿಮರ್ಶೆಯ ಮುಖ್ಯ ಕರ್ತವ್ಯ. ಮತ್ತೊಂದು ಮುಖ್ಯವಾದ ಅಂಶವೆಂದರೆ ಪ್ರಾಚೀನ ಕಾಲದ ಟೀಕೆ ಟಿಪ್ಪಣಿಗಳಿಗಿಂತ ಭಿನ್ನ ರೂಪ ಹೊಂದಿದ ಈ ವಿಮರ್ಶೆ, ಸಾಹಿತ್ಯ ರಚನೆಯಂತೆ ಒಂದು ಕಲೆಯಲ್ಲ. ಇದೊಂದು ಶಾಸ್ತ್ರ. ಏಕೆಂದರೆ ಮೌಲ್ಯಮಾಪನ ಜವಾಬ್ದಾರಿಯಾದಾಗ ಈ ಮೌಲ್ಯಮಾಪನಕ್ಕೆ ಪ್ರಮಾಣಗಳನ್ನು ನಿರ್ಧರಿಸುವುದೂ ಅನಿವಾರ್ಯ. ಈ ಪ್ರಮಾಣಗಳಿಗನುಸಾರ ವಿಮರ್ಶೆಯ ನಿರ್ವಹಣೆಯಾಗಬೇಕು ಎಂಬಲ್ಲಿಗೆ ವಿಮರ್ಶೆಯಲ್ಲಿ ಇರಬಹುದಾಗಿದ್ದ ಹೆಚ್ಚಿನಪಾಲು ಕಲೆಯ ಲಕ್ಷಣಗಳು ಕಳೆದು ಹೋಗುತ್ತವೆ. ಸಾಹಿತ್ಯ ಹಲವಾರು ಭಿನ್ನ ವಸ್ತುಗಳನ್ನು ಕೂಡಿಸುತ್ತದೆ. ಸಾಹಿತ್ಯಕಾರನಿಗೆ ಇರುವ ಕಲ್ಪನಾ ಸ್ವಾತಂತ್ಯ್ರ ಅಪಾರ. ಆದರೆ ವಿಮರ್ಶಕನಿಗೆ ಈ ಬಗೆಯ ಸ್ವಾತಂತ್ರ್ಯವಿಲ್ಲ. ಈ ಅಸ್ವಾತಂತ್ರ್ಯವೇ ವಿಮರ್ಶೆಗೆ ಶಾಸ್ತ್ರದ ಸ್ವರೂಪ ತಂದು ಕೊಡುವುದು.


ಹತ್ತೊಂಭತ್ತನೆಯ ಶತಮಾನಕ್ಕಿಂತ ಮೊದಲು ಭಾರತದ ಯಾವ ಭಾಷೆಯಲ್ಲೂ ವಿಮರ್ಶೆ ಗದ್ಯರೂಪದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಾಳಿದಾಸನ 'ರಘುವಂಶ' ಮತ್ತು 'ಮೆಘಸಂದೇಶ' ಗಳಿಗೆ ಮಲ್ಲಿನಾಥನು ಬರೆದ ಟೀಕಾಗ್ರಂಥವು ಆಧುನಿಕ ವಿಮರ್ಶೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಅವನು ತನ್ನ ಗ್ರಂಥದ ಆರಂಭದಲ್ಲೇ 'ಮೂಲದಲ್ಲಿ ಇಲ್ಲದಿರುವುದರ ಕುರಿತು ನಾನು ಬರೆಯುವುದಿಲ್ಲ. ಕೃತಿಗೆ ಬೇಡವಾದದ್ದನ್ನು ಏನೂ ಹೇಳುವುದಿಲ್ಲ' ಎನ್ನುತ್ತಾನೆ. ಆದರೆ ಮಲ್ಲಿನಾಥನ ಟೀಕಾಗ್ರಂಥವು ಗದ್ಯಾವತಾರದೆಲ್ಲೇನಿಲ್ಲ. ಅದೂ ಕಾವ್ಯವೇ. ಆದರೆ ಆ ಕಾವ್ಯದ ವಸ್ತುವೂ ಇಂದಿನ ವಿಮರ್ಶೆಗಳಂತೆ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಮಲ್ಲಿನಾಥನ ಈ ಟೀಕಾಗ್ರಂಥವನ್ನೊಂದನ್ನು ಓದಿಕೊಂಡರೆ ಏನೊಂದೂ ಅರ್ಥವಾಗುವುದಿಲ್ಲ. ಮೂಲಕಾವ್ಯಗಳನ್ನು ಓದಿಕೊಳ್ಳುತ್ತ ಈ ಟೀಕೆಯನ್ನು ಓದಬೇಕು. ಆಗ ಮಾತ್ರ ಕಾವ್ಯದ ರಸಾಸ್ವಾದನೆ ಆಗುತ್ತದೆ.


ಕನ್ನಡದಲ್ಲಿ ಈ ಹೊಸ ವಿಮರ್ಶೆಯ ಸ್ವರೂಪ ಆರಂಭವಾದದ್ದು ನವೋದಯ ಸಾಹಿತ್ಯದೊಂದಿಗೆ. ನವೋದಯದ ಕಾಲದ ಬಹುಪಾಲು ದೊಡ್ಡ ದೊಡ್ಡ ಕವಿಗಳು ವಿಮರ್ಶಕರೂ ಆಗಿದ್ದರು. ಆದ್ದರಿಂದ ನವೋದಯ ಕಾಲದ ಸಾಹಿತ್ಯದ ಆಶೋತ್ತರಗಳನ್ನು, ಅಪೇಕ್ಷೆಗಳನ್ನು ಮತ್ತು ಕಾವ್ಯದ ಕಲ್ಪನೆಗಳನ್ನು ನವೋದಯ ಕಾಲದಲ್ಲಿ ಉದಿಸಿದ ವಿಮರ್ಶೆ ಸರಿಯಾಗಿ ಪ್ರತಿಫಲಿಸುತ್ತದೆ. ಪ್ರಾಚೀನ ಕವಿಗಳ ಅಲಂಕಾರಿಕತೆ , ಆ ಕಾವ್ಯಗಳಲ್ಲಿನ ಪಾತ್ರರಚನೆಯಲ್ಲಿ ಕಂಡುಬರುವ ಮಾನವ ಸಂಬಂಧಗಳ ಅಭಾವ ಇವುಗಳನ್ನು ನವೋದಯ ವಿಮರ್ಶೆ ಟೀಕಿಸುತ್ತದೆ. ಆದರೆ ಪ್ರಾಚೀನ ಕಾವ್ಯದಲ್ಲಿ ನವೋದಯದ ಲಕ್ಷಣಗಳನ್ನು ಕಂಡರೆ ಉತ್ಸಾಹದಿಂದ ಬೀಗುತ್ತದೆ. ಈ ರೀತಿ ಸಂಬಂಧವನ್ನು ನವೋದಯ ಕಾಲದ ವಿಮರ್ಶೆ ಕಾವ್ಯ ಮತ್ತು ಸಾಹಿತ್ಯದೊಡನೆ ಬೆಳೆಸಿಕೊಂಡಿತ್ತು .

ಅದರ ಜೊತೆಗೇ ಕಾವ್ಯವೂ ವಿಮರ್ಶೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುವುದೂ ಮುಖ್ಯವಾಗುತ್ತದೆ. 'ತಿಳಿಬಾನಿನೆಡೆಯಲ್ಲಿ ಹುಣ್ಣಿಮೆ ಚಂದ್ರ ಮೂಡಿಯೇ ಮೂಡಿದನು, ಕೆಲಸವಿಲ್ಲದ ವಿಮರ್ಶಕ ವಿಮರ್ಶೆಯ ಮಾಡಿಯೇ ಮಾಡಿದನು'. ಕುವೆಂಪು ಅವರ ಈ ಪದ್ಯದಲ್ಲಿ ವಿಮರ್ಶೆಯ ಬಗ್ಗೆ ಕಾವ್ಯದ ನಿಲುವು ಏನಿರಬಹುದೆಂದು ಸ್ಪಷ್ಟವಾಗುತ್ತದೆ. ಬೇಂದ್ರೆಯವರ ದೃಷ್ಟಿಕೂನವೂ ಕೂಡ ವಿಮರ್ಷೆಯ ಬಗೆಗೆ ಅಷ್ಟೇನೂ ಹಿತವಾಗಿರುವಂತೆ ತೋರುವುದಿಲ್ಲ. ಅವರ ಒಂದು ಕವಿತೆಯಲ್ಲಿ ಕಾವ್ಯವೆಂದರೆ ಅಮೃತಕ್ಕೆ ಮೇಲೆ ಹಾರುವ ಗರುಡ, ಆದರೆ ವಿಮರ್ಶೆ ಹಾವಿನಂತೆ ಹೊಟ್ಟೆ ಹೊಸೆಯುವ ಜಂತು ಎಂಬರ್ಥಬರುವಂತೆ ಹೇಳುತ್ತಾರೆ. ಇಲ್ಲಿ ವಿಮರ್ಶೆ, ಕಾವ್ಯಕ್ಕೆ ವಿರುದ್ಧವಾದ ತತ್ವವಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳಿದಂತಿದೆ. ಆದರೆ ಅವರ ಇನ್ನೊಂದು ಕವನದಲ್ಲಿ 'ನಿನ್ನ ಮುಖ ಸ್ಪರ್ಶವೊಂದೇ ಸಾಕು, ಹೊಸ ಸೃಷ್ಟಿಯೇ ಬರಬಹುದು' ಎನ್ನುತ್ತಾರೆ. ಅಂದರೆ ಎಲ್ಲ ಕಾವ್ಯಗಳೂ, ಕವಿಗಳೂ ಅಪೇಕ್ಷಿಸುವುದು ಸಹೃದಯರನ್ನು. ಆದರೆ ಅವನ ಮೌಲ್ಯನಿರ್ಣಯ ಬೇಡ ಎಂಬುವುದೂ ಸ್ಪಷ್ಟ.

ಕೆಲವು ನವೋದಯ ಕವಿಗಳ ವಿಮರ್ಶಾ ಗ್ರಂಥಗಳನ್ನು ಅವಲೋಕಿಸಿದರೆ ಅವುಗಳಿಗೆ ಪ್ರಬಂಧದ ಲಕ್ಷಣಗಳಿರುವುದು ಕಂಡು ಬರುತ್ತದೆ. ಪ್ರಬಂಧಕಾರ ಸಾಮಾನ್ಯವಾದ ಜೀವನಾನುಭವವನ್ನು ಪರೀಕ್ಷಿಸಿ, ಪ್ರಶ್ನಿಸುತ್ತ ಬೆಲೆಕಟ್ಟುವಂತೆ ವಿಮರ್ಶಕ ತನ್ನ ಸಾಹಿತ್ಯದ ಅನುಭವವನ್ನು ಪ್ರಶ್ನಿಸಿ ಬೆಲೆಕಟ್ಟುತ್ತಾನೆ . ಉದಾಹರಣೆಗೆ ಬಿ.ಎಂ.ಶ್ರೀ ಅವರ 'ಕುಮಾರವ್ಯಾಸ' ಎಂಬ ದೀರ್ಘವಾದ ಲೇಖನವನ್ನು ನೋಡಬಹುದು. ಇಲ್ಲಿ ಕುಮಾರವ್ಯಾಸ ಪಂಪನಿಗಿಂತ ದೊಡ್ಡ ಕವಿ ಎಂಬಂತೆ ಬಿಂಬಿಸುತ್ತಾರೆ. ಶ್ರೀಯವರ ಭಾಷೆಯ ಸೌಂದರ್ಯದಿಂದಲೇ ಆ ಲೇಖನ ವಿಶಿಷ್ಟವೆನಿಸುತ್ತದೆ. ಇಂಥದೇ ಇನ್ನೊದು ಉದಾಹರಣೆಯೆಂದರೆ ಬೇಂದ್ರೆಯವರ 'ನಾಗಚಂದ್ರನ ಮಲ್ಲಿನಾಥ ಪುರಾಣ' ಎಂಬ ಲೇಖನ. ನಾಗಚಂದ್ರನ ವಾಕ್ಯಗಳನ್ನು ಮತ್ತು ವರ್ಣನೆಗಳನ್ನು ನೇರವಾಗಿ ಉಪಯೋಗಿಸುತ್ತಾ ಇಡೀ ಕಾವ್ಯವನ್ನೇ ಮೌಲ್ಯಮಾಪನಮಾಡುತ್ತಾರೆ. ನಾಗಚಂದ್ರನ ದರ್ಶನ, ನಾಗಚಂದ್ರನದೇ ಕಥೆ, ಆದರೆ ವಿಮರ್ಶೆಯ ಕೃತಿ ಮಾತ್ರ ಬೇಂದ್ರೆಯವರದು. ನವೋದಯಕಾಲದ ವಿಮರ್ಶಾಸಾಹಿತ್ಯದಲ್ಲಿ ಇದೊಂದು ಅಪರೂಪದ ಲೇಖನ. ಹೀಗೆಯೇ ಮಾಸ್ತಿಯವರ 'ವಿಮರ್ಶೆ' ಮತ್ತು ಡಿ.ವಿ.ಜಿ ಯವರ 'ಜೀವನ ಸೌಂದರ್ಯ ಮತ್ತು ಸಾಹಿತ್ಯ' ಮೊದಲಾದ ಕೃತಿಗಳು ಕನ್ನಡದ ಆಧುನಿಕ ವಿಮರ್ಶೆಗೆ ಹೊಸ ಸ್ವರೂಪ ನೀಡಿದವು. ಮುಂದೆ ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ' ಮತ್ತು 'ತವನಿಧಿ' ಯಂತಹ ವಿಮರ್ಶಾಗ್ರಂಥಗಳು ಬಂದವು. ಇವೆಲ್ಲ ವಿಮರ್ಶೆಯ ವೈವಿಧ್ಯ ಮತ್ತು ಬಹುರೂಪತೆ ದರ್ಶಿಸಿದವು. ಮತ್ತು ಇದರ ಜೊತೆಗೆ ಸಾಹಿತ್ಯ ಬೇರೆ ವಿಮರ್ಶೆ ಬೇರೆ, ಒಂದು ಕಲೆಯಾದರೆ ಇನ್ನೊದು ಶಾಸ್ತ್ರ ಎಂಬ ಸ್ಪಷ್ಟವಾದ ಅರಿವು ಮೂಡಿಸಿದವು.

ಒಂದು ಕೃತಿ ಜಗತ್ತಿನ ಐತಿಹಾಸಿಕತೆಯಿಂದ ಹುಟ್ಟಿಬರುತ್ತದೆ . ಇಲ್ಲಿ ಐತಿಹಾಸಿಕತೆ ಕೇವಲ ಇತಿಹಾಸವಲ್ಲದೆ ಆಯಾಕಾಲದ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳ ಕೇಂದ್ರ. ಈ ಕೇಂದ್ರ ಆ ಕೃತಿಯ ಅರ್ಥವಂತಿಕೆ ನಿರ್ಧರಿಸುತ್ತದೆ. ಇದೆ ಕಾರಣಕ್ಕಾಗಿಯೇ ಸಾಹಿತ್ಯ ರಚನೆಯ ನಿಯಮಗಳು ಕೂಡ ಕಾಲಕಾಲಕ್ಕೆ ಬದಲಾಗುತ್ತವೆ. ಹೀಗೆ ಸಾಹಿತ್ಯದ ಮೌಲ್ಯ ಮಾಪನದಂತೆ ಅದರ ಕೇಂದ್ರಕ್ಕೂ ವಿಮರ್ಶಕ ವಿಮರ್ಶೆ ಕೊಡಬೇಕಾಗುತ್ತದೆ. ಆದ್ದರಿಂದ ವಿಮರ್ಶೆ ಸಾಹಿತ್ಯ ಚರಿತ್ರೆಯ ಕೆಲಸವನ್ನು ಕೂಡ ಮಾಡುತ್ತದೆ. ವಿಮರ್ಶೆ ತಾನು ವಿಶಿಶ್ಟವೆನಿಸಿಕೊಳ್ಳುವುದು ಮತ್ತೊಂದು ಕಾರಣದಿಂದ. ಅದು, ವಿಮರ್ಶೆ ಮತ್ತು ಸಾಹಿತ್ಯ ಎರಡೂ ಅವಲಂಬಿಸುವುದು ಭಾಷೆಯನ್ನೇ. ಆದ್ದರಿಂದ ವಿಮರ್ಶೆ ಕೇವಲ ಸಾಹಿತ್ಯದ ಅರ್ಥಗ್ರಹಣದ ಕೆಲಸವನ್ನು ಮಾತ್ರವಲ್ಲದೇ ಸಾಹಿತ್ಯ ಸ್ಫುರಿಸಬಹುದಾದ ವಾಚ್ಯಾರ್ಥವನ್ನೂ ಮೀರಿದ ಅರ್ಥವನ್ನು ನೀಡಬೇಕು. ಅದಕ್ಕೆ ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು.

ವಿಮರ್ಶಕ ತನಗೆ ಗೊತ್ತಿಲ್ಲದಂತೆ ಮಾಡುವ ಇನ್ನೊದು ಕೆಲಸವೆಂದರೆ ತನ್ನ ವಿಮರ್ಶೆಯ ಮೂಲಕ ಇನ್ನೊದು ಕೃತಿಯನ್ನೇ ಹುಟ್ಟಿಸುವುದು! ನಮ್ಮ ವೇದಾಂತದಲ್ಲಿ ಭ್ರಮರಕೀಟಾನ್ಯಾಯ ಎಂಬ ಮಾತು ಬರುತ್ತದೆ. ಒಂದು ಕಣಜದ ಹುಳುವಿಗೆ ಯಾವಾಗಲೂ ಭ್ರಮರದ ಚಿಂತೆಯಂತೆ. ಆ ಚಿಂತೆ ಹೆಚ್ಚಾಗಿ ಅದೂ ಕೊನೆಯಲ್ಲಿ ತಾನೂ ಭ್ರಮರವಾಗಿ ಹೋಗುತ್ತದಂತೆ. ಸಾಹಿತ್ಯ ಮತ್ತು ವಿಮರ್ಶೆಯ ನಂಟೂ ಅಂಥದ್ದೇ ಎಂದು ನನಗನ್ನಿಸುತ್ತದೆ. ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ.




Monday, June 1, 2009

ಸ್ವಪ್ನವಾಸವದತ್ತಂ

( ಭಾಸ ಭಾರತದ ಅತ್ಯಂತ ಪ್ರಾಚೀನ ನಾಟಕಕಾರರುಗಳಲ್ಲಿ ಒಬ್ಬ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕಾರ ಎನ್ನುವುದಕ್ಕಿಂತ ಕವಿ ಎನ್ನುವುದು ಹೆಚ್ಚು ಸೂಕ್ತ. ಈತ ಕಾಳಿದಾಸನಿಗಿಂತ ಹಿಂದಿನವನು ಅಥವಾ ಅವನ ಸಮಕಾಲೀನ ಎಂತಲೂ ಹೇಳಲಾಗುತ್ತದೆ. ಸುಮಾರು ಕ್ರಿಸ್ತಶಕೆ ಮೂರನೇ ಶತಮಾನ. ಆದರೆ ಅವನ ದೇಶಕಾಲಾದಿಗಳ ಬಗ್ಗೆ ಇನ್ನೂ ನಿಖರವಾದ ಅಭಿಪ್ರಾಯ ಸಾಧ್ಯವಾಗದೇ 'ಭಾಸ ಸಮಸ್ಯೆ' ಎಂದೇ ಪ್ರಸಿದ್ದವಾಗಿದೆ. ಭಾಸನಿಂದ ರಚಿಸಲ್ಪಟ್ಟವು ಎಂದು ಹೇಳಲಾದ ನಾಟಕಗಳ ಸಂಗ್ರಹ ಕೇರಳದಲ್ಲಿ ದೊರೆತದ್ದರಿಂದ ಭಾಸ ದಕ್ಷಿಣ ಭಾರತದವನಿರಬೇಕೆಂದು ಊಹಿಸಲಾಗಿದೆ. ಈ ವರೆಗೆ ಅವನ ಸ್ವಪ್ನವಾಸವದತ್ತವೂ ಸೇರಿದಂತೆಸುಮಾರು ಹನ್ನೆರಡು ನಾಟಕಗಳು ಸಂಪಾದಿಸಲ್ಪಟ್ಟಿವೆ . )

ಸ್ವಪ್ನ ವಾಸವದತ್ತ ಆರು ಅಂಕಗಳ ನಾಟಕ. ಭಾಸ ಇದನ್ನು ತಾನೇ ರಚಿಸಿದ 'ಪ್ರತಿಜ್ಞಾಯೌಗಂಧರಾಯಣ' ಎಂಬ ನಾಟಕದ ಮುಂದುವರಿದ (sequel) ಭಾಗದಂತೆ ನಿರೂಪಿಸಿದ್ದಾನೆ. ಭಾಸನು ಭರತ ಮುನಿಯ ನಾಟ್ಯಶಾಸ್ತ್ರದ ಯಾವ ನಿಯಮಗಳನ್ನೂ ತನ್ನ ನಾಟಕ ರಚನೆಯಲ್ಲಿ ಪಾಲಿಸುವುದಿಲ್ಲ ಎಂಬ ಆಪಾದನೆ ಇದೆ. ಆದರೆ ಸ್ವಪ್ನವಾಸವದತ್ತದ ಮಟ್ಟಿಗೆ ಹೇಳುವದಾದರೆ ಇದೊಂದು ನಾಟ್ಯಶಾಸ್ತ್ರದ ಬಹುಪಾಲು ಎಲ್ಲ ನಿಯಮಗಳನ್ನು ಪಾಲಿಸುವ ಪರಿಪೂರ್ಣ ನಾಟಕ. ನಿಯಮದಂತೆ ನಾಟಕದ ತಲೆಬರಹ, ಆ ಕಥೆಯ ಯಾವುದಾದರೂ ಮುಖ್ಯ ದೃಷ್ಯವನ್ನು ಅಥವಾ ಅಲ್ಲಿನ ಮುಖ್ಯ ಪಾತ್ರವೊಂದರ (ನಾಯಕನ ಅಥವಾ ನಾಯಿಕೆಯ) ಹೆಸರನ್ನು ಹೇಳಬೇಕು. 'ವಾಸವದತ್ತಾ' ಈ ನಾಟಕದ ನಾಯಿಕೆ. ಮತ್ತು ನಾಯಕ, ವತ್ಸ ದೇಶದ ಮಹಾರಾಜನಾದ ಉದಯನ, ತನ್ನ ಪತ್ನಿ ವಾಸವದತ್ತೆಯನ್ನು ಕನಸಿನಲ್ಲಿ ಕಾಣುವ ಸನ್ನಿವೇಶ (ಸ್ವಪ್ನಾಂಕ) ಕಥೆಗೆ ಹೊಸ ತಿರುವನ್ನು ಕೊಡುತ್ತದೆ. ಅದಕ್ಕನುಸಾರ ಭಾಸ ಈ ನಾಟಕದ ಹೆಸರನ್ನು ಇಡುತ್ತಾನೆ. 'ಸ್ವಪ್ನವಾಸವದತ್ತಂ'. Dream of Vasavadatta.


" ಉದಯನವೇಂದು ಸವರ್ಣಾ
ವಾಸವದತ್ತಾಬಲೌ ಬಲಸತ್ವಾ
ಪದ್ಮಾವತೀ ಪೂರ್ಣೌ
ವಸಂತಕಂ ಭುಜೌ ಪಾತಾ "

ಈ ನಾಂದಿ ಪದ್ಯದೊಂದಿಗೆ ಸ್ವಪ್ನವಾಸವದತ್ತ ಆರಂಭವಾಗುತ್ತದೆ. ಇದು ಬಲರಾಮನ ಸ್ತುತಿ. (ಆದರೆ ಕೃಷಿ ದೇವತೆಯಾದ ಬಲರಾಮನನ್ನು ಭಾಸ ತನ್ನ ನಾಟಕದ ಆರಂಭದಲ್ಲಿ ಏಕೆ ನಮಿಸುತ್ತಾನೆ ಎಂಬುವುದಕ್ಕೆ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ.) ಈ ನಾಂದಿಯಲ್ಲಿ ಗಮನಿಸಬೇಕಾದ ಸುಂದರ ಅಂಶವೆಂದರೆ ಭಾಸ, ಶ್ಲೇಶಾಲಂಕಾರದ ಸಹಾಯದಿಂದ ನಾಟಕದಲ್ಲಿಯ ಉದಯನ, ವಾಸವದತ್ತೆ, ಪದ್ಮಾವತಿ, ವಸಂತಕ ಇಂತಹ ಪ್ರಮುಖ ಪಾತ್ರಗಳ ಹೆಸರನ್ನು ಚಮತ್ಕಾರವಾಗಿ ಅಡಗಿಸಿರುವುದು.

ಇಲ್ಲಿರುವುದು ಬಲಭದ್ರನ ತೋಳುಗಳ ವರ್ಣನೆ. 'ಉದಯನವೇಂದು' ಎಂದರೆ ಉದಯಿಸುತ್ತಿರುವ ಚಂದ್ರ (ಇಂದು). ಬಲರಾಮನ ತೋಳುಗಳು ಆಗತಾನೆ ಉದಯಿಸುತ್ತಿರುವ ಚಂದ್ರನ ಬಣ್ಣದವು. Spotless white. ಈ ಸಾಲಿನಲ್ಲಿ ಉದಯನವೇಂದು ಎನ್ನುತ್ತಲೇ ಭಾಸ ತನ್ನ ನಾಟಕದ ನಾಯಕ, 'ಉದಯನ' ನ ಹೆಸರನ್ನು ಹೇಳಿಬಿಡುತ್ತಾನೆ. 'ವಾಸವದತ್ತಾಬಲೌ ಬಲಸತ್ವಾ' ಇದು ಎರಡನೇ ಸಾಲು. ಬಲಭದ್ರನು ಮದಿರಾ ಪ್ರಿಯ. ಅದಕ್ಕೆ ಭಾಸ, ಅವನ ತೋಳುಗಳಿಗೆ ಆ ಸುರಾಪಾನದಿಂದ (ಸುರೆ=ಆಸವ) ಬಲ ದೊರೆತು ಅವು ತುಂಬಿಕೊಂಡಿವೆ ಎನ್ನುತ್ತಾನೆ. ಈ ಸಾಲಿನಲ್ಲಿ ನಾಯಿಕೆ 'ವಸವದತ್ತಾ' ಳ ಹೆಸರು ಉಲ್ಲೇಖಿಸಿದಂತಾಗುತ್ತದೆ. 'ಪದ್ಮಾವತೀ ಪೂರ್ಣೌ', ಪದ್ಮ ಅಂದರೆ ಕಮಲ, ಕಮಲದಂತೆ ಅರಳಿರುವ ತೋಳುಗಳು ಬಲರಾಮನದ್ದು. ಇಲ್ಲಿ 'ಪದ್ಮಾವತೀ' ಪದಪ್ರಯೋಗ ಉದಯನನ ಎರಡನೇ ಪತ್ನಿಯ ಹೆಸರನ್ನು ಹೇಳುತ್ತದೆ. ವಸಂತಕನದ್ದು ಈ ನಾಟಕದಲ್ಲಿ ವಿದೂಷಕನ (comedian) ಪಾತ್ರ. ಈತ ಉದಯನನ ಆಪ್ತ ಮಿತ್ರ. ಅವನ ಹೆಸರನ್ನೂ ಭಾಸ ನಾಂದಿಯಲ್ಲೇ ಹೇಳಿಬಿಡುತ್ತಾನೆ. ಹೀಗೆ ನಾಟಕದ ಪಾತ್ರಗಳ ಪರಿಚಯ ನಮಗೆ ನಾಟಕದ ಮೊದಲಲ್ಲೇ ಮಾಡಿಸುತ್ತದೆ ಈ ನಾಂದಿ. ಆದರೆ ಪಾತ್ರಗಳ ಪ್ರವೇಶವಾಗುವವರೆಗೂ ಈ ನಾಂದಿ ಶ್ಲೋಕದ ಚಮತ್ಕಾರದ ಅರಿವಾಗುವುದಿಲ್ಲ. ಅಲ್ಲಿಯವರೆಗೆ ನಮಗೆ ಈ ಪದ್ಯದಲ್ಲಿ ಕಾಣುವುದು ಬಲಯುತವೂ ಸುಂದರವೂ ಆದ ಬಲರಾಮನ ತೋಳುಗಳು ನಮ್ಮನ್ನು ರಕ್ಷಿಸಲಿ ಎಂಬ ಕೋರಿಕೆ ಮಾತ್ರ.


ಮೊದಲೇ ಹೇಳಿದಂತೆ ಸ್ವಪ್ನವಾಸವದತ್ತ ಪ್ರತಿಜ್ಜ್ನಾಯೌಗಂಧರಾಯಣ ಎಂಬ ನಾಟಕದ ಮುಂದುವರಿದ ಭಾಗ. ಪ್ರತಿಜ್ಜ್ನಾಯೌಗಂಧರಾಯಣ ನಾಟಕದ ಕೊನೆಯಲ್ಲಿ ಕುಶಲ ಮಂತ್ರಿಯಾದ ಯೌಗಂಧರಾಯಣನ ನೆರವಿನಿಂದ ಉದಯನ ಆವಂತಿ ದೇಶದ ರಾಜಕುವರಿ ವಾಸವದತ್ತೆಯನ್ನು ಅಪಹರಿಸಿ ವಿವಾಹವಾಗಿರುತ್ತಾನೆ. ಪ್ರತಿಜ್ಜ್ನಾಯೌಗಂಧರಾಯಣದ ನಾಯಕ ನಾಯಿಕೆಯರು ಉದಯನವಾಸವದತ್ತೆಯರಾದರೂ ಅಲ್ಲಿ ಇವರಿಬ್ಬರೂ ರಂಗದಮೇಲೆ ಬರುವುದೇ ಇಲ್ಲ! ಅಲ್ಲಿ ಯೌಗಂಧರಾಯಣನೇ ಮುಖ್ಯಪಾತ್ರವಹಿಸುತ್ತಾನೆ. ಆದರೆ ಸ್ವಪ್ನವಾಸವದತ್ತದಲ್ಲಿ ಮೊದಲ ದೃಷ್ಯದಲ್ಲೇ ವಾಸವದತ್ತೆಯ ಪ್ರವೇಶವಾಗುತ್ತದೆ.


ಈ ನಾಟಕದ ಹಿನ್ನಲೆ ಹೀಗಿದೆ. ಪ್ರಿಯಸಖಿ ಮತ್ತು ಲಲಿತ ಕಲೆಗಳಲ್ಲಿ ತನ್ನ ಶಿಷ್ಯೆಯಾದ ವಾಸವದತ್ತೆಯನ್ನು ವಿವಾಹವಾದ ಬಳಿಕ ಉದಯನನಿಗೆ ರಾಜ್ಯಭಾರದಲ್ಲಿ ಆಸಕ್ತಿ ಕಳೆದುಹೋಗಿರುತ್ತದೆ. ಇದರಿಂದ ಉದಯನನ ರಾಜಧಾನಿ ಕೌಶಾಂಬಿ ವೈರಿರಾಜರುಗಳ ಪಾಲಾಗಿ ಹೋಗುತ್ತದೆ. ಕುಶಲ ಮಂತ್ರಿಯಾದ ಯೌಗಂಧರಾಯಣನು ರಾಜ್ಯವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಉಪಾಯವೊಂದನ್ನು ಮಾಡುತ್ತಾನೆ. ಉದಯನ ಇಲ್ಲದ ಸಮಯದಲ್ಲಿ, ವಾಸವದತ್ತೆ ಮತ್ತು ಯೌಗಂಧರಾಯಣನು ಆಕಸ್ಮಿಕವಾಗಿ ಘಟಿಸಿದ ಬೆಂಕಿ ಅನಾಹುತವೊಂದರಲ್ಲಿ ಮೃತರಾದರು ಎಂಬುವಂತೆ ನಾಟಕವಾಡುತ್ತಾನೆ. ಜೊತೆಯಲ್ಲಿ ಯೌಗಂಧರಾಯಣನಿಗೆ ರಾಜ್ಯಬಲವರ್ಧನೆಗಾಗಿ ಉದಯನನು ಮಗಧ ದೇಶದ ರಾಜಕುಮಾರಿಯಾದ ಪದ್ಮಾವತಿಯನ್ನು ವರಿಸಿ ಮಗಧ ದೇಶದೊಂದಿಗೆ ಸಂಬಂಧ ಬೆಳೆಯಲಿ ಎಂಬ ಆಶಯವೂ ಇರುತ್ತದೆ. ವಾಸವದತ್ತೆಯೂ ಪತಿಯ ಒಳಿತಿಗಾಗಿ ಈ ನಾಟಕವನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ವಾಸವದತ್ತೆಯನ್ನು ಕಳೆದುಕೊಂಡ ಉದಯನ ತೀವ್ರ ಶೋಕದಲ್ಲಿರುತ್ತಾನೆ.



ಯೌಗಂಧರಾಯಣ ಓರ್ವ ಸನ್ಯಾಸಿಯಂತೆ ಮತ್ತು ವಾಸವದತ್ತೆ ಅವನ ತಂಗಿಯಾಗಿ ಆವಂತಿಕಾ ಎಂಬ ಹೆಸರಿನಲ್ಲಿ ಮಗಧ ರಾಜ್ಯಕ್ಕೆ ಬರುತ್ತಾರೆ ಎಂಬಲ್ಲಿಂದ ನಾಟಕದ ಮೊದಲ ಅಂಕ ಆರಂಭವಾಗುತ್ತದೆ. ಯೌಗಂಧರಾಯಣ ರಾಜಕುಮಾರಿ ಪದ್ಮಾವತಿಯನ್ನು ಭೇಟಿ ಮಾಡಿ ತನ್ನ ತಂಗಿಯ ಪತಿ ವ್ಯವಹಾರ ನಿಮಿತ್ತ ಹೊರ ಪ್ರದೇಶಕ್ಕೆ ಹೋಗಿರುವುದಾಗಿಯೂ ಆತ ಬಂದ ನಂತರದಲ್ಲಿ ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಮತ್ತು ಅಲ್ಲಿಯವರೆಗೆ ಪದ್ಮಾವತಿಯ ಸಖಿಯಂತೆ ವಾಸವದತ್ತೆಯನ್ನು ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಾನೆ.



ಮುಂದೆ ಉದಯನ ಮಗಧ ರಾಜ್ಯಕ್ಕೆ ಅತಿಥಿಯಾಗಿ ಬಂದಾಗ ಮಗಧ ದೇಶದ ರಾಜ ಉದಯನನ ರಾಜಧಾನಿ ಕೌಶಾಂಬಿಯನ್ನು ಮರಳಿ ಪಡೆಯಲು ಸಹಾಯ ಮಾಡಲು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಬದಲಾಗಿ ತನ್ನ ತಂಗಿ ಪದ್ಮಾವತಿಯನ್ನು ವಿವಾಹವಾಗುವಂತೆ ಉದಯನನನ್ನು ಕೇಳಿಕೊಳ್ಳುತ್ತಾನೆ. ಆದರೆ ಉದಯನನಿಗೆ ವಾಸವದತ್ತೆಯನ್ನು ಕಳೆದುಕೊಂಡ ದುಃಖ ಇನ್ನೂ ಮರೆಯಾಗಿರುವುದಿಲ್ಲ. ಆತನ ದುಃಖವನ್ನು ಭಾಸ, ಸೀತೆಯನ್ನು ಕಾಡಿನಲ್ಲಿ ಕಳೆದುಕೊಂಡ ರಾಮನ ಶೋಕಕ್ಕೆ ಹೋಲಿಸುತ್ತಾನೆ. ಆದರೂ ರಾಜ್ಯವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾರಣಗಳಿಂದ ಈ ವಿವಾಹಕ್ಕೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಸಂತಸಗೊಂಡ ಪದ್ಮಾವತಿ ಈ ವಿಷಯವನ್ನು ತನ್ನ ಸಖಿ ಆವಂತಿಕಾಳಿಗೆ (ವಾಸವದತ್ತೆಗೆ) ತಿಳಿಸುತ್ತಾಳೆ. ವಾಸವದತ್ತೆಗೆ ತನ್ನ ಪತಿಯನ್ನು ತನ್ನ ಕಣ್ಣೆದುರಿಗೇ ಕಳೆದುಕೊಳ್ಳುವ ಬಗ್ಗೆ ಸಂಕಟವಾಗುತ್ತದೆ. ಆದರೆ ಭಾಸ ಆ ನೊಂದ ಮನಕ್ಕೆ ಸಾಂತ್ವನ ನೀಡಲೋ ಎಂಬಂತೆ ಒಂದು ಸುಂದರ ದೃಶ್ಯವನ್ನು ನಿರ್ಮಿಸುತ್ತಾನೆ. ಉದಯನ ಮತ್ತು ಆತನ ಮಿತ್ರ, ವಸಂತಕ ಮಗಧ ರಾಜನ ಅರಮನೆಯ ಲತಾಮಂಟಪದಲ್ಲಿ ಕುಳಿತಿರುವ ಸಂದರ್ಭದಲ್ಲಿ ವಾಸವದತ್ತೆಯೂ ಆ ಉದ್ಯಾನದ ಇನ್ನೊಂದು ಭಾಗದಲ್ಲಿರುತ್ತಾಳೆ. ಆಕೆ ಲತೆಗಳ ಸಮೂಹ ಮರೆಯಾದ ಕಾರಣದಿಂದ ಉದಯನ ಮತ್ತು ವಸಂತಕನಿಗೆ ಕಾಣುವುದಿಲ್ಲ. ಆದರೆ ವಾಸವದತ್ತೆ ಇವರು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಆಗ ವಸಂತಕ ಉದಯನನನ್ನು ನಿನಗೆ ಪದ್ಮಾವತಿ ಮತ್ತು ವಾಸವದತ್ತೆಯರಲ್ಲಿ ಯಾರು ಹೆಚ್ಚು ಪ್ರಿಯರು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಉದಯನ ಪದ್ಮಾವತಿ ಗುಣವಂತೆ ಮತ್ತು ತನಗೆ ನೆಚ್ಚಿನವಳಾದರೂ, ವಾಸವದತ್ತೆ ತನ್ನ ಮೊದಲ ಪ್ರೇಮ ಮತ್ತು ಆಪ್ತ ಸಖಿ. ಅವಳ ಸ್ಥಾನ ತನ್ನ ಹೃದಯದಲ್ಲಿ ಮತ್ತೆ ಯಾರಿಂದಲೂ ತುಂಬಲು ಅಸಾಧ್ಯ ಎನ್ನುತ್ತಾನೆ. ಮನಸ್ಸಿಗೆ ಮುದ ನೀಡುವ ಇಂತಹ ಪ್ರಯೋಗಗಳನ್ನು ಭಾಸ ತನ್ನ ನಾಟಕಗಳಲ್ಲಿ ಹೇರಳವಾಗಿ ಮಾಡುತ್ತಾನೆ. ಸಂಸ್ಕೃತದ ಅನೇಕ ನಾಟಕಗಳಲ್ಲಿ ಮತ್ತು ಕಾವ್ಯಗಳಲ್ಲಿ ಉದಯನ ಎಂಬ ಹೆಸರಿನ ಪಾತ್ರವನ್ನು ಕಾಣಬಹುದು. ಆ ಎಲ್ಲ ನಾಟಕಗಳಲ್ಲಿ ಉದಯನನನ್ನು ಸ್ತ್ರೀಲೋಲುಪ ಮತ್ತು ಅತ್ಯಂತ ಚಂಚಲ ಪಾತ್ರವನ್ನಾಗಿ ಚಿತ್ರಿಸುತ್ತಾರೆ. ಆದರೆ ಸ್ವಪ್ನವಾಸವದತ್ತದಲ್ಲಿನ ಉದಯನ ಅತ್ಯಂತ ಸೌಮ್ಯವಾದ ಪಾತ್ರ. ಕಳೆದುಕೊಂಡ ಪತ್ನಿಗಾಗಿ ಪರಿತಪಿಸುತ್ತಿರುತ್ತಾನೆ.



ಮುಂದೆ ಪದ್ಮಾವತಿ ಮತ್ತು ಉದಯನರ ಮದುವೆಯ ಸಂದರ್ಭದಲ್ಲಿ ವಾಸವದತ್ತೆಗೇ ವರಮಾಲೆಯನ್ನು ಸಿದ್ದಪಡಿಸುವಂತೆ ಪದ್ಮಾವತಿ ಕೇಳಿಕೊಳ್ಳುತ್ತಾಳೆ. ಆಗ ವಾಸವದತ್ತೆ ಆ ಮಾಲೆಯಲ್ಲಿ ಪತಿಯ ಆಯಸ್ಸು ಹೆಚ್ಚುವಂತೆ ಪ್ರಭಾವಿಸುವ ಮೂಲಿಕೆಯೊಂದನ್ನು ಹೆಚ್ಚು ಹೆಚ್ಚಾಗಿ ಸೇರಿಸಿ ವರಮಾಲೆಯನ್ನು ಸುಂದರವಾಗಿ ಸಿದ್ದಪಡಿಸುತ್ತಾಳೆ. ವಾಸವದತ್ತೆ ಮತ್ತು ಪದ್ಮಾವತಿಯರ ನಡುವೆ ಸಹಜವಾಗಿ ಇರಬಹುದಾಗಿದ್ದ ಸವತಿ ಅಸೂಯೆಯನ್ನು ಯಾವ ಸನ್ನಿವೇಶವನ್ನೂ ಭಾಸ ತೋರಿಸುವುದಿಲ್ಲ. ಬದಲಿಗೆ ಇವರಿಬ್ಬರಲ್ಲಿನ ಸ್ನೇಹವನ್ನು ಅಲ್ಲಲ್ಲಿ ತೋರಿಸುತ್ತಾನೆ.



ಐದನೇ ಅಂಕ ಸ್ವಪ್ನಾಂಕ. ಈ ಅಂಕವನ್ನು ಅತ್ಯಂತ ಸುಂದರವಾಗಿ ಭಾಸ ನಿರೂಪಿಸಿದ್ದಾನೆ. ಪದ್ಮಾವತಿ ಮತ್ತು ಉದಯನರ ವಿವಾಹದ ಒಂದೆರಡು ದಿನಗಳ ನಂತರದಲ್ಲಿ ಪದ್ಮಾವತಿ ತಲೆಶೂಲೆಯಿಂದ ಬಳಲುತ್ತಿರುತ್ತಾಳೆ. ಅವಳನ್ನು ಬೇರೊಂದು ಅಂತಃಪುರದಲ್ಲಿ ವಿಶ್ರಾಂತಿಗಾಗಿ ಕರೆದುಕೊಂಡು ಹೋಗಿರುತ್ತಾರೆ. ಇದನ್ನು ಅರಿಯದ ಉದಯನ ಅವಳನ್ನು ಕಾಣಲು ಅವಳ ಅಂತಃಪುರಕ್ಕೆ ಬರುತ್ತಾನೆ. ಆದರೆ ಅವಳು ಅಲ್ಲಿ ಇರದಿದ್ದನ್ನು ನೋಡಿ ಕಾಯುತ್ತ ಕುಳಿತುಕೊಳ್ಳುವ ಅವನು ಮಧ್ಯಾಹ್ನದ ಸಮಯವಾದ್ದರಿಂದ ಅರಿವಿಲ್ಲದೆ ಅಲ್ಲಿಯೇ ನಿದ್ರೆಹೋಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ವಸಂತಕ ಹೊದಿಕೆ ಹೊದಿಸಿ ಹೋಗುತ್ತಾನೆ. ಆ ಸಮಯದಲ್ಲಿ ವಾಸವದತ್ತೆ ಪದ್ಮಾವತಿಯನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಾಳೆ. ಅವಳಿಗೆ ಉದಯನ ಅಲ್ಲಿ ಮಲಗಿರುವುದು ತಿಳಿಯದೆ ಪದ್ಮಾವತಿಯೇ ಮಲಗಿದ್ದಾಳೆಂದು ಭಾವಿಸಿ ಉದಯನನ ಹಣೆಯನ್ನು ಸ್ಪರ್ಶಿಸುತ್ತಾಳೆ. ತಕ್ಷಣವೇ ಆಕೆಗೆ ಮಲಗಿರುವುದು ಉದಯನ ಎಂಬ ಅರಿವಾಗಿ ಅವಸರದಿಂದ ಹೊರಟು ಹೋಗುತ್ತಾಳೆ. ಆದರೆ ಉದಯನನಿಗೆ ವಾಸವದತ್ತೆಯ ಜೊತೆಯಲ್ಲಿದ್ದಂತೆ ಸ್ವಪ್ನದಲ್ಲಿ ಅನುಭವವಾಗುತ್ತಿರುತ್ತದೆ. ಅಷ್ಟರಲ್ಲೇ ವಾಸವದತ್ತೆಯ ಸ್ಪರ್ಶ ಅವನನ್ನು ಎಚ್ಚರಿಸುತ್ತದೆ. ಆ ಸ್ಪರ್ಶ ವಾಸವದತ್ತೆಯದೇ ಎಂದು ಖಚಿತವಾಗಿ ಭಾವಿಸುವ ಉದಯನ ವಸಂತಕನನ್ನು ಕರೆದು ವಾಸವದತ್ತೆ ಇನ್ನೂ ಜೀವಿಸಿದ್ದಾಳೆ ಎಂದೆಲ್ಲ ಹೇಳುತ್ತಾನೆ. ಅದಕ್ಕೆ ವಸಂತಕ ನಿಮಗೆ ಕೇವಲ ಸ್ವಪ್ನವಾಗಿದೆ. ಇನ್ನೆಲ್ಲಿ ವಾಸವದತ್ತೆ ಬರಲು ಸಾಧ್ಯ. ಇನ್ನು ತಾವು ಪದ್ಮಾವತಿಯ ಬಗ್ಗೆ ಯೋಚಿಸಬೇಕಾಗಿ ಹೇಳುತ್ತಾನೆ. ಆದರೂ ಉದಯನನಲ್ಲಿ ವಾಸವದತ್ತೆ ನಿಸ್ಸಂಶಯವಾಗಿ ಬದುಕಿದ್ದಾಳೆ ಎಂಬ ಭಾವನೆ ಉಳಿದುಬಿಡುತ್ತದೆ.



ಕೊನೆಯ ಅಂಕದಲ್ಲಿ ಮಗಧ ರಾಜನ ಸಹಾಯದಿಂದ ಉದಯನ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತದನಂತರ ಪದ್ಮಾವತಿಯ ಆಶಯದಂತೆ ಅವರಿಬ್ಬರೂ ಆವಂತಿ ರಾಜ್ಯಕ್ಕೆ, ವಾಸವದತ್ತೆಯ ತಂದೆಯ ಮನೆಗೆ ಹೋಗುತ್ತಾರೆ. ಅಲ್ಲಿ ವಾಸವದತ್ತೆಯ ಭಾವ ಚಿತ್ರವನ್ನು ನೋಡುವ ಪದ್ಮಾವತಿ ಚಕಿತಗೊಳ್ಳುತ್ತಾಳೆ. ವಾಸವದತ್ತಾ ಮತ್ತು ತನ್ನ ಪ್ರಿಯ ಸಖಿ ಆವಂತಿಕೆಗೆ ಅತ್ಯಂತ ಹೋಲಿಕೆ ಇದೆ ಎಂಬುದಾಗಿ ಉದಯನನಿಗೆ ಹೇಳುತ್ತಾಳೆ. ಉದಯನ ತಕ್ಷಣ ಆವಂತಿಕೆಯನ್ನು ಬರಲು ಹೇಳುತ್ತಾನೆ. ಆದರೆ ಆವಂತಿಕೆ ಉದಯನನಿದ್ದಲ್ಲಿಗೆ ಬರಲು ಒಪ್ಪದೇ ಪರಪುರುಷನ ದರ್ಶನ ಪತಿಯಿಂದ ದೂರ ಇರುವ ತನಗೆ ತಕ್ಕದ್ದಲ್ಲ ಎಂದು ಪದ್ಮಾವತಿಗೆ ತಿಳಿಸುತ್ತಾಳೆ. ಅಲ್ಲಿಗೆ ಅದೇ ಸಮಯದಲ್ಲಿ ಯೌಗಂಧರಾಯಣ ಸನ್ಯಾಸಿ ವೇಷದಲ್ಲಿ ಬಂದು ಪದ್ಮಾವತಿಯ ಬಳಿ ತನ್ನ ತಂಗಿಯ ಪತಿ ಮರಳಿ ಬಂದಿದ್ದಾನೆ ಆದ್ದರಿಂದ ಕರೆದುಕೊಂಡು ಹೋಗಲು ಬಂದಿದ್ದೇನೆ ಎನ್ನುತ್ತಾನೆ. ಆದರೆ ಉದಯನನು ಯೌಗಂಧರಾಯಣನನ್ನು ಸುಲಭವಾಗಿ ಗುರುತಿಸಿ ಅಪ್ಪಿಕೊಂಡು ಸ್ವಾಗತಿಸುತ್ತಾನೆ. ವಾಸವದತ್ತೆ ಎಲ್ಲಿಯೆಂದು ಕೇಳಿದಾಗ ಆವಂತಿಕಾ ವೇಷದಲ್ಲಿದ್ದ ವಾಸವದತ್ತೆ ಎದುರಿಗೆ ಬರುತ್ತಾಳೆ. ಮತ್ತು ಯೌಗಂಧರಾಯಣ ವಾಸವದತ್ತೆಯನ್ನು ಉದಯನನಿಂದ ದೂರವಿಟ್ಟ ಉದ್ದೆಶವನ್ನೆಲ್ಲ ತಿಳಿಸಿ ಕ್ಷಮೆ ಯಾಚಿಸುತ್ತಾನೆ. ಮತ್ತು ವಾಸವದತ್ತೆ ಇಷ್ಟು ದಿನ ಪದ್ಮಾವತಿಯ ಜೊತೆಯಲ್ಲಿಯೇ ಇದ್ದುದಾಗಿಯೂ ಅವಳು ಪರಿಶುದ್ದಳಾಗಿರುವುದರಿಂದ ಒಪ್ಪಿಕೊಳ್ಳಬೇಕೆಂದೂ ಕೇಳಿಕೊಳ್ಳುತ್ತಾನೆ. ಉದಯನ ಸಂತಸದಿಂದ ವಾಸವದತ್ತೆಯನ್ನು ಸ್ವೀಕರಿಸುತ್ತಾನೆ. ಹೀಗೆ ಸ್ವಪ್ನವಾಸವದತ್ತ ನಾಟಕ ಸುಖಾಂತ್ಯ ಕಾಣುತ್ತದೆ.



ಭಾಸ ಅದ್ಭುತ ನಾಟಕಕಾರ . ಅವನ ನಾಟಕಗಳಲ್ಲಿಯ ಭಾಷೆಯ ಸರಳತೆ ಮತ್ಯಾವ ಸಂಸ್ಕೃತ ನಾಟಕಕಾರರುಗಳಲ್ಲಿ ಕಾಣಬರುವುದಿಲ್ಲ. ಈ ಸಂಬಂಧ ಭಾಸ, ಕಾಳಿದಾಸನನ್ನೂ ಮೀರಿ ನಿಲ್ಲುತ್ತಾನೆ. ಮತ್ತು ಭಾಸನ ಹಾಸ್ಯಪ್ರಜ್ಞೆಯೂ ಅಷ್ಟೇ ಸುಂದರ. ಅದಕ್ಕೇ 'ಭಾಸೋ ಹಾಸಃ' ಎಂಬ ಮಾತು ಪ್ರಸಿದ್ದ. ಭಾಸನೆಂದರೇ ಹಾಸ್ಯ. ಈ ನಾಟಕದಲ್ಲಿ ವಸಂತಕನ ಮೂಲಕ ಅನೇಕ ಹಾಸ್ಯ ಸನ್ನಿವೇಶಗಳನ್ನು ಭಾಸ ಸೃಷ್ಟಿಸಿ ಓದುಗರಲ್ಲಿ ಮುದವನ್ನು ಉಂಟುಮಾಡುತ್ತಾನೆ. ಉದಯನ ವಾಸವದತ್ತೆಯ ವಿರಹದಿಂದ ದುಃಖಗೊಂಡು ಕುಳಿತಾಗ ವಸಂತಕ ಕಥೆಯೊಂದನ್ನು ಹೇಳುತ್ತೇನೆ ಎಂದು ಬರುತ್ತಾನೆ. ಹೀಗೆ ಕಥೆ ಪ್ರಾರಂಭಿಸುತ್ತಾನೆ. ಬ್ರಹ್ಮದತ್ತ ಎಂಬ ನಗರಿಯಲ್ಲಿ ಕೌಶಾಂಬಿ ಎಂಬ ರಾಜನಿದ್ದನು. ತಕ್ಷಣ ದುಃಖತಪ್ತನಾದ ಉದಯನ ತಲೆಯೆತ್ತಿ ನಗಲು ಆರಂಭಿಸುತ್ತಾನೆ. ಮತ್ತು ವಸಂತಕನನ್ನು ಕುರಿತು 'ಮೂರ್ಖ, ಅದು ಕೌಶಾಂಬಿ ನಗರಿ, ಅಲ್ಲಿನ ರಾಜ ಬ್ರಹ್ಮದತ್ತ ! ' ಎಂದು ಹೇಳುತ್ತಾನೆ. ಹೀಗೆ ಭಾಸ ಬೇಸರದ ಮತ್ತು ಶುಷ್ಕವೆನಿಸುವ ಸನ್ನಿವೇಶಗಳನ್ನು ತನ್ನ ಹಾಸ್ಯ ಪ್ರಜ್ಞೆಯಿಂದ ತಕ್ಷಣ ರಂಜನೀಯವಾಗಿ ಮಾಡಿಬಿಡುತ್ತಾನೆ.



ಭಾಸನ ಕಾವ್ಯಭಾಷೆಗೆ ತನ್ನದೇ ಆದ ಒಂದು ವಿಶಿಷ್ಟ ಸ್ವಂತಿಕೆ ಇದೆ. ಅವನು ಕಾವ್ಯದಲ್ಲಿ ತನ್ನ ಹಿಂದಿನ ಕವಿಗಳ ಯಾರ ಮಾತುಗಳನ್ನೂ ಉದ್ದರಿಸುವುದಿಲ್ಲ.ಅವನ ಕಥೆ ಹೇಳುವಲ್ಲಿನ ಚಾಕಚಕ್ಯತೆಯೂ ಅಸಾಧಾರಣವಾದುದು. ಈ ಪ್ರಸ್ತುತ ನಾಟಕದಲ್ಲಿಯೇ ನೋಡಿದರೆ ಅವನು ತನ್ನ ನಾಟಕದಲ್ಲಿ ಮಾಡಿದ ಆಧುನಿಕ ಪ್ರಯೋಗಗಳು ಅಚ್ಚರಿಯನ್ನುಂಟುಮಾಡುತ್ತವೆ. ನೇರ ಸಂಭಾಷಣೆ ಮತ್ತು ಸನ್ನಿವೇಶಗಳನ್ನು ವಿವರವಾಗಿ ಬಣ್ಣಿಸುವ ಭಾಸನ ಶೈಲಿ ಎಲ್ಲಿಯೂ ನಿಸ್ಸಾರ ಅನ್ನಿಸುವುದಿಲ್ಲ. ಈ ಕಾರಣದಿಂದಾಗಿಯೇ ಭಾಸನ ನಾಟಕಗಳು ರಂಗದ ಮೇಲೆ ರಂಜನೀಯವಾಗಿ ಮೂಡಿಬರುತ್ತವೆ. ಕೇರಳದಲ್ಲಿ ಇತ್ತೀಚಿನ ಭಾಸನ ನಾಟಕಗಳ ರಂಗಪ್ರಯೋಗ ಅತ್ಯಂತ ಜನಪ್ರಿಯ ಮತ್ತು ಸಫಲಗೊಂಡಿವೆ. ಹೀಗೆ ಇಂದಿಗೂ ಭಾಸ ಸಹೃದಯರನ್ನು ತನ್ನ ಕಾವ್ಯಗಳತ್ತ ಸೆಳೆಯುತ್ತಿದ್ದಾನೆ.